LATEST NEWS
ಚಡ್ಡಿ ಕದ್ದು ಧರಿಸಿದ್ದಕ್ಕೆ ಸಹೋದ್ಯೋಗಿಯನ್ನು ಚಾಕುವಿನಿಂದ ಇರಿದು ಕೊಂದ!
ಲಕ್ನೋ, ಮಾರ್ಚ್ 01: ಚಡ್ಡಿ ಕದ್ದಿದ್ದಕ್ಕೆ ಕೊಲೆಯೊಂದು ನಡೆದಿರುವ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ವಿವೇಕ್ ಎಂದು ಗುರುತಿಸಲಾಗಿದೆ. ಈತನನ್ನು ಸಹೋದ್ಯೋಗಿ ಅಜಯ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಗಾರ್ಮೆಂಟ್ ನಲ್ಲಿ ಕೆಲಸ ಮಾಡುತ್ತಿರುವ ವಿವೇಕ್ ಹಾಗೂ ಅಜಯ್ ಗುರುವಾರ ಒಂದೇ ರೂಂನಲ್ಲಿ ಉಳಿದುಕೊಂಡಿದ್ದರು. ಈ ವೇಳೆ ವಿವೇಕ್ ಧರಿಸಿದ್ದ ಅಂಡರ್ ವೇರ್ ಅನ್ನು ಅಜಯ್ ಗಮನಿಸಿದ್ದಾನೆ. ಇದೇ ವಿಚಾರವಾಗಿ ಇಬ್ಬರ ಮಧ್ಯೆ ಜಗಳ ನಡೆದು ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ.
ಒಳ ಉಡುಪು ವಿಚಾರವಾಗಿ ಅಜಯ್ ಹಾಗೂ ವಿವೇಕ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ಜಗಳ ತಾರಕಕ್ಕೇರುತ್ತಿದ್ದಂತೆಯೇ ಅಜಯ್ ಅಲ್ಲೇ ಇದ್ದ ತರಕಾರಿ ಕಟ್ ಮಾಡುವ ಚಾಕು ತೆಗೆದುಕೊಂಡು ವಿವೇಕ್ ಗೆ ಇರಿದಿದ್ದಾನೆ. ಘಟನೆಯಿಂದ ವಿವೇಕ್ ಗಂಭೀರ ಗಾಯಗೊಳ್ಳುತ್ತಿದ್ದಂತೆಯೇ ಅಜಯ್ ಅಲ್ಲಿಂದ ಕಾಲ್ಕಿತ್ತಿದ್ದಾನೆ ಎಂದು ತಿಳಿಸಿದ್ದಾರೆ.
ಇತ್ತ ಘಟನೆಯಿಂದ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿವೇಕ್ ನನ್ನು ಇನ್ನೊಬ್ಬ ಸಹೋದ್ಯೋಗಿ ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾನೆ. ಆದರೆ ಚಿಕಿತ್ಸೆ ಫಲಿಕಾರಿಯಾಗದೆ ವಿವೇಕ್ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾನೆ.
ಘಟನೆ ಸಂಬಂಧಿಸಿದಂತೆ ಆರೋಪಿ ಅಜಯ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಫ್ಯಾಕ್ಟರಿ ಮಾಲೀಕ ಹಾಗೂ ಕೆಲಸ ಸಹೋದ್ಯೋಗಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
You must be logged in to post a comment Login