LATEST NEWS
ಕಣ್ಮನ ಸೆಳೆದ ನಮ್ಮಕುಡ್ಲ ಗೂಡು ದೀಪ ಪಂಥ
ಕಣ್ಮನ ಸೆಳೆದ ನಮ್ಮಕುಡ್ಲ ಗೂಡು ದೀಪ ಪಂಥ
ಮಂಗಳೂರು ನವೆಂಬರ್ 4: ತುಳುನಾಡಿನಲ್ಲಿ ದೀಪಾವಳಿ ಅಮವಾಸ್ಯೆಗೆ ವಿಶೇಷ ಮಹತ್ವ. ತಮ್ಮದೇ ರಾಜ ಎಂದು ಪೂಜಿಸುವ ಬಲಿ ಚಕ್ರವರ್ತಿಯನ್ನು ಕರೆದು ಪೂಜಿಸುವ ದಿನ ಇದು. ದೀಪಾವಳಿಯ ಬೆಳಕಿನ ಹಬ್ಬವಾಗಿರುವುದರಿಂದ ತುಳುನಾಡಿನಲ್ಲಿ ಬಹುತೇಕ ಮಂದಿ ಮನೆಯಲ್ಲಿ ಗೂಡು ದೀಪ ಇಡುತ್ತಾರೆ.
ಮಂಗಳೂರಿನಲ್ಲಿ ಸಂಪ್ರದಾಯಿಕ ತಯಾರಿಕೆಗೆ ಕಳೆದ 19 ವರ್ಷಗಳಿಂದ ಪ್ರೋತ್ಸಾಹ ನೀಡಲಾಗುತಿದ್ದು ಬೃಹತ್ ಗೂಡುದೀಪ ತಯಾರಿಕಾ ಸ್ಪರ್ಧೆಯನ್ನು ನಡೆಸಲಾಗುತ್ತಿದೆ. ಸದ್ದಿಲ್ಲದೇ ನಡೆಯುತ್ತಿರುವ ಈ ಗೂಡು ದೀಪ ಸ್ಪರ್ಧೆಗೆ ಸಾವಿರಾರು ಗೂಡುದೀಪಗಳು ಪ್ರತಿವರ್ಷ ಪ್ರದರ್ಶನಕ್ಕೆ ಬರುತ್ತವೆ.
ಕಳೆದ 19 ವರ್ಷಗಳಿಂದ ಮಂಗಳೂರಿನ ನಮ್ಮ ಕುಡ್ಲ ಸಂಸ್ಥೆ ಈ ಗೂಡುದೀಪ ತಯಾರಿಕಾ ಪಂಥ ಆಯೋಜಿಸುತ್ತಾ ಬಂದಿದೆ. ಹಿಂದೆ ಕೇವಲ 30 ಸ್ಪರ್ಧಿಗಳಿಂದ ಆರಂಭಗೊಂಡಿದ್ದ ಈ ಗೂಡುದೀಪ ತಯಾರಿಕಾ ಸ್ಪರ್ಧೆಯಲ್ಲಿ ಇಂದು ಸಾವಿರಕ್ಕೂ ಮಿಕ್ಕಿ ಸ್ಪರ್ಧಾಳುಗಳು ಗೂಡುದೀಪಗಳನ್ನು ತಯಾರಿಸಿ ಪ್ರದರ್ಶಿಸುತ್ತಾರೆ.
ಈ ವರ್ಷವೂ ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದ ಆವರಣದಲ್ಲಿ ಗೂಡುದೀಪ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ನಮ್ಮ ಕುಡ್ಲ ಸಂಸ್ಥೆ ಆಯೋಜಿಸಿರುವ ಈ ಗೂಡುದೀಪ ಸ್ಪರ್ಧೆ 3 ವಿಭಾಗಗಳಲ್ಲಿ ನಡೆಯುತಿದ್ದು. ಸಂಪ್ರದಾಯಿಕ, ಪ್ರತಿಕೃತಿ ಸೇರಿದಂತೆ ಆಧುನಿಕ ಶೈಲಿ ಹೀಗೆ 3 ವಿಭಾಗಗಳಲ್ಲಿ ಗೂಡುದೀಪ ಸ್ಪರ್ಧೆ ನಡೆಸಲಾಗುತಿದೆ. ಈ ಸ್ಪರ್ಧೆಯ ವಿಶೇಷವೆಂದರೆ ಗೂಡುದೀಪವನ್ನು ಸ್ಪರ್ಧಿ ಖುದ್ದಾಗಿ ಕೈಯಿಂದಲೇ ತಯಾರಿಸಿರಬೇಕು.
ಈ ಬಾರಿಯ ವಿಶೇಷತೆ ಏನೆಂದರೆ ಮಹಿಳೆಯರು ಬಳಸುವ ರಬ್ಬರ್ ಬ್ಯಾಂಡ್ ನಿಂದ ತಯಾರಿಸಿದ ಗೂಡು ದೀಪ. ನಟ್ ಮೂಲಕ ತಯಾರಿಸಿದ ಗೂಡು ದೀಪ ಪಂಥದ ಎಲ್ಲರ ಆಕರ್ಷಣೆ ಕೇಂದ್ರ ವಾಗಿತ್ತು, ಬೆಂಕಿ ಕಡ್ಡಿಗಳನ್ನು ಬಳಸಿ ತಯಾರಿಸಿದ ಗೂಡು ದೀಪ, ಹೊದ್ಲಿನಿಂದ ತಯಾರಿಸಿದ ಗೂಡುದೀಪ, ಪೊರಕೆ ಕಡ್ಡಿ, ಚಿಪ್ಸ್ ನಿಂದ ತಯಾರಿಸಿದ ಗೂಡು ದೀಪಗಳು ಈ ಬಾರಿಯ ಆಕರ್ಷಣೆಯ ಕೇಂದ್ರವಾಗಿದ್ದವು, ತುಳುನಾಡಿನ ಸಂಸ್ಕೃತಿ ಪರಂಪರೆಯ ಪ್ರತೀಕವಾದ ಯಕ್ಷಗಾನ ತಾಳಮದ್ದಲೆ , ನಾಗಮಂಡಲ, ಭೂತಾರಾಧನೆ, ಯಕ್ಷಗಾನ ರಂಗಸ್ಥಳದ ಪ್ರಾತ್ಯಕ್ಷಿಕೆಗಳು ಪಂಥಕ್ಕೆ ಮತ್ತಷ್ಟು ರಂಗು ನೀಡಿದವು. ಹುಲ್ಲನ್ನು ಬಳಸಿ ರಚಿಸಲಾಗಿದ್ದ ಗಣಪತಿಯ ಪ್ರತಿರೂಪಗಳು , ಪ್ರಾತ್ಯಕ್ಷಿಕೆ ಗೂಡುದೀಪಗಳು ಚಾರಿತ್ರಿಕ ಘಟನೆಗಳಿಗೆ ಸಾಕ್ಷಿಯಾಗಿವೆ. ಇನ್ನೊಂದೆಡೆ ಈ ವಿಭಾಗದಲ್ಲಿ ಚಿಣ್ಣರ ಕೈಚಳಕ, ದೃಷ್ಠಿಕೋನ ಅನಾವರಣಗೊಂಡಿದೆ.
ಈ ಬಾರಿ 800ಕ್ಕೂ ಅಧಿಕ ಸ್ಪರ್ಧಿಗಳು ಗೂಡು ದೀಪ ಪಂಥದಲ್ಲಿ ಭಾಗವಹಿಸಿದ್ದವು, ಈ ಸ್ಪರ್ಧೆಯಲ್ಲಿ ಬಾಗವಹಿಸಿ ಗೆದ್ದ ಮೂವರು ಸ್ಪರ್ಧಿಗಳಿಗೆ ಚಿನ್ನದ ನಾಣ್ಯಗಳನ್ನು ನೀಡುವುದು ಈ ಪಂಥದ ಸಂಪ್ರದಾಯ.
You must be logged in to post a comment Login