Connect with us

    LATEST NEWS

    ತಾರಸಿ ತೋಟ ನಿರ್ಮಾಣ ಮಾಡಿ- ದಿನಕರ ಬಾಬು

    ತಾರಸಿ ತೋಟ ನಿರ್ಮಾಣ ಮಾಡಿ- ದಿನಕರ ಬಾಬು

    ಉಡುಪಿ, ಫೆಬ್ರವರಿ 10 : ಸಾರ್ವಜನಿಕರು ತಮ್ಮ ಮನೆಯ ಮೇಲ್ಚಾವಣಿಗಳಲ್ಲಿ ತಾರಸಿ ತೋಟ ನಿರ್ಮಾಣ ಮಾಡುವ ಮೂಲಕ ದಿನಬಳಕೆಯ ತರಕಾರಿಗಳನ್ನು ಬೆಳೆಯಬಹುದು ಎಂದು ಉಡುಪಿ ಜಿಲ್ಲಾ ಪಂಚಯತ್ ಅಧ್ಯಕ್ಷ ದಿನಕರ ಬಾಬು ತಿಳಿಸಿದ್ದಾರೆ,
    ಅವರು ಶನಿವಾರ ದೊಡ್ಡಣಗುಡ್ಡೆಯ ರೈತ ಸೇವಾ ಕೇಂದ್ರದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ಜಿಲ್ಲೆ, ತೋಟಗಾರಿಕೆ, ಕೃಷಿ ಹಾಗೂ ಕೃಷಿ ಸಂಬಂದಿತ ಇಲಾಖೆಗಳು, ಉಡುಪಿ ಜಿಲ್ಲಾ ಕೃಷಿಕ ಸಮಾಜ ಇವರ ಸಹಯೋಗದಲ್ಲಿ ಆಯೋಜಿಸಿದ್ದ , ಉಡುಪಿ ಜಿಲ್ಲಾಮಟ್ಟದ ಫಲಪುಷ್ಪ ಪ್ರದರ್ಶನ ಹಾಗೂ ರೈತ ದಿನಾಚರಣೆ-2018 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ತಾರಸಿ ತೋಟ ನಿರ್ಮಾಣ ಮಾಡುವುದರ ಮೂಲಕ ದಿನಬಳಕೆಯ ತರಕಾರಿ ಪಡೆಯುವುದರ ಜೊತೆಗೆ ಮಕ್ಕಳಿಗೆ ಕೈತೋಟದ ಕಲ್ಪನೆ ಮೂಡಿಸಬಹುದಾಗಿದೆ ಎಂದು ಹೇಳಿದ ದಿನಕರ ಬಾಬು, ತ್ಯಾಜ್ಯ ನಿಲ್ಲುವ ಕಡೆಗಳಲ್ಲಿ ಕೆನ್ನಾ ಗಿಡಗಳನ್ನು ಬೆಳುಸುವದರ ಮೂಲಕ ತ್ಯಾಜ್ಯ ಕಡಿಮೆ ಮಾಡಲು ಹಾಗೂ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಲು ಸಾಧ್ಯವಿದೆ ಈ ಕುರಿತು ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ವಿಶೇಷ ಸಾಧನೆ ಮಾಡಿದ ಕೃಷಿಕರಾದ , ಪ್ರಕಾಶ ನಾಯ್ಕ್, ಶ್ರೀಪತಿಭಟ್, ಶ್ರೀನಿವಾಸ ಭಟ್, ಶ್ರೀಪಾದ ಕಟ್ಟೆ, ಗಣಪಯ್ಯ ವಾಲ್ತಾಜೆ ಅವರನ್ನು ಕೃಷಿಕ ಸಮಾಜದಿಂದ ಸನ್ಮಾನಿಸಲಾಯಿತು.

    ಕೃಷಿ ಇಲಾಖೆ ವತಿಯಿಂದ, ತಾಲೂಕುಮಟ್ಟದ ಕೃಷಿಕ ಪ್ರಶಸ್ತಿಯನ್ನು ಭರತ್ ಕುಮಾರ್, ಗೌತಮ್ ಹೆಗ್ಡೆ, ಕರುಣಾಕರ್ ಶೆಟ್ಟಿ ಅವರಿಗೆ ವಿತರಿಸಲಾಯಿತು.ಹೈನುಗಾರಿಕೆಯಲ್ಲಿ ಸಾಧನೆ ಮಾಡಿದ ವಿಜಯ್ ಕುಮಾರ್, ಗಣೇಶ್ ಶೆಟ್ಟಿ, ರಾಕೇಶ್ ಶೆಟ್ಟಿ, ಆಡು ಸಾಕಣೆಯಲ್ಲಿ ಸಾದನೆ ಮಾಡಿದ ಫ್ರಾನ್ಸಿಲ್ ಮಸ್ಕರೇನಸ್ ಮತ್ತು ಸಮಗ್ರ ಕೃಷಿಯಲ್ಲಿ ಸಾದನೆ ಮಾಡಿದ ಗುರುರಾಜಭಟ್ ರವರನ್ನು ಸನ್ಮಾನಿಸಲಾಯಿತು.

    ಫೆಬ್ರವರಿ 12 ರ ವರೆಗೆ ನಡೆಯುವ ಜಿಲ್ಲಾಮಟ್ಟದ ಫಲಪುಷ್ಪ ಪ್ರದರ್ಶನದಲ್ಲಿ, ವಿವಿಧ ಬಗೆಯ ಹೂ ಗಳಿಂದ ಅಲಂಕರಿಸಿದ 12 ಅಡಿ ಎತ್ತರದ ಶಿವಲಿಂಗ ಮೂರ್ತಿ, ಜರ್ಬೆರಾ ಹೂ ಗಳಿಂದ ಅಲಂಕರಿಸಿದ 5 ಅಡಿ ಎತ್ತರದ ನಂದಿ ಮೂರ್ತಿ, ಹೂ ಗಳಿಂದ ಜೋಡಿಸಿದ ಆನೆ, ಹುಲಿ, ಹಾಗೂ ಚಿಟ್ಟೆಗಳ ಆಕೃತಿ, ಪುಷ್ಪಾಲಂಕಾರದ ಕಾಳಿಂಗ ಮರ್ದನ ಕಲಾಕೃತಿ, ವಿವಿಧ ಜಾತಿಯ ಪಾಪಾಸು ಕಳ್ಳಿಗಳ ಅಲಂಕಾರಿಕ ಜೋಡಣೆ, ವಿವಿಧ ಅಲಂಕಾರಿಕಾ ಪುಷ್ಪ ಗಿಡಗಳ ಪ್ರದರ್ಶನ ವಿಶೇಷ ಆಕರ್ಷಣೆಯಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply