BANTWAL
ಯುವಕನೆಂದು ಮಂಗಳಮುಖಿಯನ್ನು ಪ್ರೀತಿಸಿದ ಬಂಟ್ವಾಳದ ಯುವತಿ….!! 4 ವರ್ಷದ ಪ್ರೀತಿ ಅಂತ್ಯ….!!

ಬಂಟ್ವಾಳ ಜುಲೈ 23: ಯುವಕನೆಂದು ಮಂಗಳಮುಖಿಯನ್ನು ಫೆಸ್ ಬುಕ್ ನಲ್ಲಿ ಪ್ರೀತಿಸಿದ್ದ ಬಂಟ್ವಾಳದ ಯುವತಿ ಕೊನೆಗೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ ಬಳಿಕ ಸತ್ಯ ಗೊತ್ತಾಗಿ ಯುವತಿ ಬೆಚ್ಚಿ ಬಿದ್ದಿದ್ದಾಳೆ.
ಬಂಟ್ವಾಳ ತಾಲೂಕಿನ ವಿಟ್ಲ ಪಡ್ನೂರು ಗ್ರಾಮದ ಯುವತಿಗೆ ನಾಲ್ಕು ವರ್ಷದ ಹಿಂದೆ ಫೇಸ್ಬುಕ್ನಲ್ಲಿ ಪ್ರದೀಪ್ ಎಂಬಾತನ ಪರಿಚಯವಾಗಿತ್ತು. ಸಿವಿಲ್ ಇಂಜಿನಿಯರ್’ ಎಂದು ಪರಿಚಯಿಸಿಕೊಂಡಿದ್ದ ಆತನ ಮುಖ ನೋಡದೆ ಇದ್ದರೂ, ಪ್ರೀತಿಯ ಮಾತಿಗೆ ಮರುಳಾಗಿ ಪ್ರೇಮಪಾಶಕ್ಕೆ ಸಿಲುಕಿದ್ದಳು. ಪ್ರೀತಿ ವಿಚಾರವಾಗಿ ಯುವತಿ ಮನೆಮಂದಿಯೊಂದಿಗೆ ಜಗಳವಾಡುತ್ತಿದ್ದಳು.

ಈ ಬಗ್ಗೆ ಯುವತಿ ತಾಯಿ ವಕೀಲೆ ಶೈಲಜಾ ರಾಜೇಶ್ ಅವರಲ್ಲಿ ವಿಷಯ ತಿಳಿಸಿದ್ದರು. ಅವರು ಕೌನ್ಸೆಲಿಂಗ್ ಮಾಡಿದಾಗ ಯುವತಿಯು ಪ್ರದೀಪ್ನ ಮೋಹಕ್ಕೆ ಒಳಗಾಗಿದ್ದು, ಎಷ್ಟು ಮನವರಿಕೆ ಮಾಡಿದರೂ ಮಾತು ಕೇಳದಿದ್ದಾಗ ವಿಟ್ಲ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿತ್ತು.
ವಿಟ್ಲ ಹಾಗೂ ಉಡುಪಿ ಜಿಲ್ಲೆ ಶಂಕರನಾರಾಯಣ ಪೊಲೀಸರ ಸಹಕಾರದೊಂದಿಗೆ ಸ್ವತಃ ಶೈಲಜಾ ರಾಜೇಶ್ ಯುವತಿಗೆ ಕರೆ ಮಾಡುತ್ತಿದ್ದಾತನ ಸಿದ್ದಾಪುರದ ಸ್ಥಳವನ್ನು ಪತ್ತೆ ಮಾಡಿ ಮನೆಗೆ ಭೇಟಿ ನೀಡಿದಾಗ ಅಚ್ಚರಿ ಅಂಶ ಬೆಳಕಿಗೆ ಬಂದಿದೆ. ಯುವತಿಯೊಂದಿಗೆ ಪ್ರದೀಪ್ ಎಂಬಾತನ ಹೆಸರಿನಲ್ಲಿ ಗಂಡಸಿನ ಧ್ವನಿಯಲ್ಲಿ ಮಾತನಾಡುತ್ತಿದ್ದದ್ದು ಜ್ಯೋತಿ ಎಂಬ ಹೆಸರಿನ ಮಂಗಳಮುಖಿ ಎಂದು ತಿಳಿದು ಬಂದಿದೆ. ನಾಲ್ಕು ವರ್ಷದಿಂದ ಮನೆಮಂದಿಗೂ ತಲೆನೋವಾಗಿದ್ದ ಯುವತಿ ಪ್ರೇಮ ಪ್ರಕರಣ ಅಂತ್ಯ ಕಂಡಿದೆ.