LATEST NEWS
ಹಿಂದುಗಳಿಗೆ ಮಾತ್ರ ಪ್ರವೇಶ! ದೇವರ ದರ್ಶನ ಸಿಗದಿದ್ದಕ್ಕೆ ನಟಿ ಅಮಲಾ ಪೌಲ್ ಖಡಕ್ ಪ್ರತಿಕ್ರಿಯೆ
ಕೊಚ್ಚಿ, ಜನವರಿ 18: ಕೇರಳದ ತಿರುವೈರಾಣಿಕ್ಕುಳಂ ಮಹಾದೇವ ದೇವಸ್ಥಾನಕ್ಕೆ ದಕ್ಷಿಣ ಭಾರತದ ನಟಿ ಅಮಲಾ ಪೌಲ್ ಅವರಿಗೆ ಪ್ರವೇಶ ನಿರಾಕರಿಸಲಾಗಿದೆ. ನಡತುರಪ್ಪು ಹಬ್ಬದ ಹಿನ್ನೆಲೆಯಲ್ಲಿ ನಿನ್ನೆ ಅಮಲಾ ಅವರು ದೇವಸ್ಥಾನಕ್ಕೆ ಆಗಮಿಸಿದ್ದ ವೇಳೆ ಅಲ್ಲಿನ ಅಧಿಕಾರಿಗಳು ತಡೆದಿದ್ದಾರೆ.
ಇದರಿಂದಾಗಿ ರಸ್ತೆಯಲ್ಲೇ ದೇವರ ದರ್ಶನ ಮಾಡಿ, ಪ್ರಸಾದ ಸ್ವೀಕರಿಸಿ ಅಮಲಾ ಅವರು ಸಪ್ಪೆ ಮೋರೆ ಹಾಕಿಕೊಂಡು ಹಿಂದಿರುಗಿದ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಗುರುವಾಯೂರು ದೇವಸ್ಥಾನದಂತೆ ತಿರುವೈರಾಣಿಕ್ಕುಳಂ ಮಹಾದೇವ ದೇವಸ್ಥಾನದಲ್ಲೂ ಹಿಂದುಗಳಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ. ಅಧಿಕಾರಿಗಳು ದೇವಸ್ಥಾನದ ಸಂಪ್ರದಾಯಗಳನ್ನು ಮಾತ್ರ ಅನುಸರಿಸಿದ್ದಾರೆ ಎಂದು ದೇವಸ್ಥಾನದ ಟ್ರಸ್ಟ್ ಕಾರ್ಯದರ್ಶಿ ಪ್ರಸೂನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬೇರೆ ಧರ್ಮದವರು ದೇವಸ್ಥಾನಕ್ಕೆ ಭೇಟಿ ನೀಡುತ್ತಿಲ್ಲ ಎಂದು ನಾನಿಲ್ಲಿ ಹೇಳುತ್ತಿಲ್ಲ. ಆದರೆ, ಅದು ಯಾರಿಗೂ ತಿಳಿದಿಲ್ಲ. ಆದರೆ, ಸೆಲೆಬ್ರಿಟಿ ಬಂದರೆ ಅದು ದೊಡ್ಡ ವಿವಾದವಾಗುತ್ತದೆ. ಅದಕ್ಕಾಗಿಯೇ ನಾವು ನಟಿಗೆ ಪ್ರವೇಶ ನಿರಾಕರಿಸಿದ್ದೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಮಲಾ ಪೌಲ್ ಅವರು ಪ್ರತಿಕ್ರಿಯೆ ನೀಡಿದ್ದು, 2023ರಲ್ಲಿ ಧಾರ್ಮಿಕ ತಾರತಮ್ಯ ಇನ್ನೂ ಅಸ್ತಿತ್ವದಲ್ಲಿದೆ ಎಂದು ತಿಳಿದು ನಾನು ತುಂಬಾ ದುಃಖಿತಳಾಗಿದ್ದೇನೆ ಮತ್ತು ನಿರಾಶೆಗೊಂಡಿದ್ದೇನೆ ಎಂದಿದ್ದಾರೆ. ಆದರೆ, ನಾನು ದೂರದಿಂದಲೇ ದೇವಿಯ ಅನುಗ್ರಹವನ್ನು ಪಡೆದೆ. ಧಾರ್ಮಿಕ ತಾರತಮ್ಯದಲ್ಲಿ ಶೀಘ್ರದಲ್ಲೇ ಬದಲಾವಣೆ ಕಾಣುತ್ತೇನೆಂದು ಭಾವಿಸುತ್ತೇನೆ. ಧರ್ಮದ ಆಧಾರದಲ್ಲಿ ಅಲ್ಲ ನಮ್ಮನ್ನು ಮನುಷ್ಯರಂತೆ ಕಾಣುವ ಕಾಲ ಬರಲಿದೆ ಎಂದು ಅಮಲಾ ದೇವಸ್ಥಾನದ ರಿಜಿಸ್ಟರ್ ಬುಕ್ನಲ್ಲಿ ಬರೆದಿದ್ದಾರೆ.
You must be logged in to post a comment Login