FILM
ಸರ್ಜರಿ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ದಿಗಂತ್
ಬೆಂಗಳೂರು, ಜುಲೈ 03: ಗೋವಾದಲ್ಲಿ ಸಮ್ಮರ್ ಶಾರ್ಟ್ಸ್ ಸ್ಟಂಟ್ ಮಾಡುವ ವೇಳೆ ಗಂಭೀರ ಗಾಯಗೊಂಡಿದ್ದ ನಟ ದಿಗಂತ್, ಶಸ್ತ್ರಚಿಕಿತ್ಸೆಗಾಗಿ ಗೋವಾದಿಂದ ಬೆಂಗಳೂರಿಗೆ ಏರ್ಲಿಫ್ಟ್ ಆಗಿದ್ದರು. ಇದೀಗ ಚೇತರಿಸಿಕೊಂಡಿರುವ ದಿಗಂತ್, ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಕಷ್ಟದ ಕಾಲದಲ್ಲಿ ಸಹಾಯ ಮಾಡಿದವರಿಗೆ ಧನ್ಯವಾದ ಹೇಳಿದ್ದಾರೆ.
ವೀಡಿಯೋ ಮೂಲಕ ತಮ್ಮ ಚೇತರಿಕೆಯ ಬಗ್ಗೆ ತಿಳಿಸಿರುವ ದಿಗಂತ್, ಮೊನ್ನೆ ನಡೆದ ಘಟನೆಯಿಂದ ಒಂದು ಸಣ್ಣ ಸರ್ಜರಿ ಆಯ್ತು. ಈ ನಿಟ್ಟಿನಲ್ಲಿ ನಾನು ಒಂದಷ್ಟು ಜನರಿಗೆ ಧನ್ಯವಾದ ಹೇಳಬೇಕಿತ್ತು. ವೆಂಕಟ್ ನಾರಾಯಣ್ ಅವರು ಮಾಡಿದ ಸಹಾಯವನ್ನು ನಾನು ಜೀವನ ಪರ್ಯಂತ ಮರೆಯಲು ಸಾಧ್ಯವಿಲ್ಲ. ಗೋವಾದ ಸಿಎಂ ಪ್ರಮೋದ್ ಸಾವಂತ್ ನನಗೆ ಏರ್ಲಿಫ್ಟ್ ಮಾಡಲು ಸಹಾಯ ಮಾಡಿದ್ರು. ಗೋವಾ ಹಾಗೂ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗಳು ನನಗೆ ಸಾಕಷ್ಟು ಸಹಾಯ ಮಾಡಿವೆ ಎಂದು ಸ್ಮರಿಸಿಕೊಂಡರು.
ಎಲ್ಲದಕ್ಕೂ ಮುಖ್ಯವಾಗಿ ಡಾ. ವಿದ್ಯಾಧರ್ ಅವರು ನನಗೆ ದೇವರ ರೂಪದಲ್ಲಿ ಬಂದು ಸರ್ಜರಿ ಮಾಡಿದ್ರು. ಒಂದು ದೊಡ್ಡ ದುರ್ಘಟನೆ ನಡೆಯಬಹುದಾಗಿತ್ತು. ಆದರೆ ಒಂದು ಸಿಂಪಲ್ ಸರ್ಜರಿ ಮೂಲಕ ನನ್ನನ್ನು ಗುಣಪಡಿಸಿದ್ದಾರೆ ಎಂದು ತಿಳಿಸಿದರು. ನನ್ನನ್ನು ಇಷ್ಟ ಪಡುವ ಎಲ್ಲಾ ಅಭಿಮಾನಿಗಳು, ಇಂಡಸ್ಟ್ರಿ ಸ್ನೇಹಿತರು, ಹಿತೈಷಿಗಳು, ಕುಟುಂಬದವರು, ಎಲ್ಲರೂ ತಮ್ಮ ತಮ್ಮ ಪ್ರಾರ್ಥನೆಗಳ ಮೂಲಕ ನನ್ನನ್ನು ನೆನೆಸಿಕೊಂಡಿದ್ದೀರಿ.
ನಿಮ್ಮೆಲ್ಲರ ಪ್ರಾರ್ಥನೆಯಿಂದಲೇ ನಾನು ಕೇವಲ 1 ವಾರದಲ್ಲಿ ಗುಣಮುಖನಾಗಿದ್ದೇನೆ. ಇನ್ನು ಕೇವಲ 2 ವಾರಗಳಲ್ಲಿ ಸಂಪೂರ್ಣ ಗುಣಮುಖನಾಗಿ, ನನ್ನ ವೃತ್ತಿಯ ಕಡೆ ಗಮನಹರಿಸುತ್ತೇನೆ ಎಂದರು. ಎಲ್ಲಾ ಮಾಧ್ಯಮ ಮಿತ್ರರಿಗೂ ಧನ್ಯವಾದ ತಿಳಿಸಿದ ದಿಗಂತ್, ನೀವೆಲ್ಲಾ ಕಷ್ಟಪಟ್ಟು ನನ್ನ ಅಪಘಾತದ ಸುದ್ದಿಯನ್ನು ಎಲ್ಲರಿಗೂ ತಲುಪಿಸಿದ್ದೀರಿ ಎಂದು ನೆನಪಿಸಿಕೊಂಡರು.
You must be logged in to post a comment Login