Connect with us

    FILM

    ಕನ್ನಡ ಮಾಧ್ಯಮಗಳ ಕ್ಷಮೆ ಕೇಳಿದ ನಟ ದರ್ಶನ…ಕೊನೆಗೂ ಅಂತ್ಯಗೊಂಡ ಮುನಿಸು…!!

    ಬೆಂಗಳೂರು ಅಗಸ್ಟ್ 25: ಕನ್ನಡದ ಖ್ಯಾತ ನಟ ದರ್ಶನ್ ತೂಗುದೀಪ್ ಹಾಗೂ ಕನ್ನಡ ಮಾಧ್ಯಮಗಳ ನಡುವೆ ಇದ್ದ ಮುನಿಸು ಇದೀಗ ಶಾಂತವಾಗಿದೆ. ಕರ್ನಾಟಕ ಮಾಧ್ಯಮ ಮತ್ತು ಪತ್ರಕರ್ತರ ಕ್ಷಮೆ ಕೋರಿ ದರ್ಶನ್ ಟ್ವೀಟ್ ಮಾಡಿದ್ದು, ಬರೋಬ್ಬರಿ 2 ವರ್ಷಗಳ ಬಳಿಕ ಗಲಾಟೆ ಅಂತ್ಯವಾಗಿದೆ.


    ಎರಡು ವರ್ಷಗಳ ಹಿಂದೆ ದರ್ಶನ ಕನ್ನಡ ಮಾಧ್ಯಮಗಳನ್ನು ಹಿಯಾಳಿಸಿ ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು, ಅದರ ಬೆನ್ನಲ್ಲೆ ಕರ್ನಾಟಕದ ಮಾಧ್ಯಮಗಳು ದರ್ಶನ್ ಅವರ ಯಾವುದೇ ರೀತಿಯ ಸುದ್ದಿಯಾಗಲಿ, ಸಿನೆಮಾ ಪ್ರಚಾರವಾಗಲಿ ಮಾಡುತ್ತಿರಲಿಲ್ಲ. ಹೀಗಾಗಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮತ್ತು ಎಡಿಟರ್ಸ್ ಗಿಲ್ಡ್ ಆಫ್ ಬೆಂಗಳೂರು ನೇತೃತ್ವದಲ್ಲಿ ಸಭೆ ನಡೆದಿತ್ತು. ಪರಭಾಷೆಯ ಚಿತ್ರಗಳ ಎದುರು ಕನ್ನಡ ಸಿನಿಮಾಗಳು ಗೆಲ್ಲಬೇಕಿದ್ದರೆ ಮಾಧ್ಯಮಗಳ ನೆರವೂ ಬೇಕು. ಹಲವು ದಶಕಗಳಿಂದ ಮಾಧ್ಯಮ ಮತ್ತು ಚಿತ್ರರಂಗ ಒಂದೇ ಕುಟುಂಬದಂತಿದೆ. ಇನ್ನು ಮುಂದೆಯೂ ಅದೇ ಭಾವನೆಯಲ್ಲಿ ಮುಂದುವರಿಯೋಣ ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸಭೆಯಲ್ಲಿ ಅಭಿಪ್ರಾಯಪಟ್ಟರು.

    ಮಾಧ್ಯಮ ಯಾರನ್ನೂ ದ್ವೇಷಿಸುವುದಿಲ್ಲ. ಅದು ಸೂಕ್ತವಾಗಿ ಪ್ರತಿಕ್ರಿಯಿಸುತ್ತಾ ಇರುತ್ತದೆ, ವಿಮರ್ಶಾತ್ಮಕ ನಿಲುವು ಹೊಂದಿರುತ್ತದೆ. ದರ್ಶನ್ ಕನ್ನಡದ ಹೆಮ್ಮೆಯ ನಟ ಎಂದು ಮಾಧ್ಯಮ ಯಾವತ್ತೂ ಭಾವಿಸಿದೆ. ಎಲ್ಲರೂ ಜತೆಯಾಗಿ ನಡೆಯೋಣ. ಪರಸ್ಪರರ ಬಗ್ಗೆ ಗೌರವ ಇಟ್ಟುಕೊಳ್ಳೋಣ ಎಂದು ಮಾಧ್ಯಮ ಸಂಪಾದಕರ ಸಭೆ ಅಭಿಪ್ರಾಯಪಟ್ಟಿತು. ಈ ಸಭೆಯ ಬಳಿಕ ಟ್ವೀಟ್ ಮಾಡಿರುವ ದರ್ಶನ


    ಸಮಸ್ತ ಕರ್ನಾಟಕ ಜನತೆಗೆ ನನ್ನ ಸೆಲೆಬ್ರಿಟಿಗಳಿಗೆ ಹಾಗೂ ಹಿರಿಯ ಪತ್ರಕರ್ತರಿಗೆ, ಮಾಧ್ಯಮ ಮಿತ್ರರಿಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು, ಕಳೆದ ಸುಮಾರು ಎರಡು ವರ್ಷಗಳಿಂದ ನನ್ನ ಹಾಗೂ ಕನ್ನಡ ಮಾಧ್ಯಮ ಮಿತ್ರರ ನಡುವೆ ಒಂದು ಕಂದಕ ಉಂಟಾಗಿತ್ತು. ಈ ವರಮಹಾಲಕ್ಷ್ಮಿ ಹಬ್ಬದ ಮುನ್ನಾದಿನ, ಮಿತ್ರ ರಾಕ್ ಲೈನ್ ವೆಂಕಟಕೇಶ್ ನೇತೃತ್ವದಲ್ಲಿ ನನ್ನ ಹಾಗೂ ಕನ್ನಡದ ಪ್ರಮುಖ ಮಾಧ್ಯಮಗಳ ಸಂಪಾದಕರ ನಡುವೆ ಮಾತುಕತೆ ನಡೆದು ಇಡೀ ಪ್ರಕರಣ ಸುಖಾಂತ್ಯಗೊಂಡಿದೆ. ಕೆಲ ವರ್ಷಗಳ ಹಿಂದಿನ ನನ್ನ ಆಡಿಯೋ ಒಂದು ದುರುದ್ದೇಶಪೂರ್ವಕವಾಗಿ ವೈರಲ್ ಆಗಿ ಇಡೀ ವಿವಾದಕ್ಕೆ ಕಾರಣವಾಗಿತ್ತು. ಅದು ಯಾವುದೋ ವಿಷಮ ಘಳಿಗೆಯಲ್ಲಿ ಒಬ್ಬ ವ್ಯಕ್ತಿಯ ಮಾತಿಗೆ ಪ್ರತಿಕ್ರಿಯೆಯಾಗಿತ್ತು. ಅದು ಮಾಧ್ಯಮದ ಇತರ ವ್ಯಕ್ತಿಗಳನ್ನು ಕುರಿತು ಆಡಿದ ಮಾತಾಗಿರಲಿಲ್ಲ. ಆ ವ್ಯಕ್ತಿ ಯಾವ ದುರುದ್ದೇಶದಿಂದ ಮಾಡಿದರು ಗೊತ್ತಿಲ್ಲ ಆದರೂ ಆ ವ್ಯಕ್ತಿಗೆ ಒಳ್ಳೆಯದಾಗಲಿ ಮುಂದೆ ಆ ವ್ಯಕ್ತಿ ಈರೀತಿಯ ದುರುದ್ದೇಶವನ್ನು ಮರುಕಳಿಸದಿರಲಿ.

    ಆದರೂ ಅಂತಹ ಮಾತಿನಿಂದ ನೋವುಂಟಾಗಿದ್ದರೆ ಮಾಧ್ಯಮದ ಹಿರಿಯರಿಗೆ ಕ್ಷಮೆ ಕೋರುವುದರಲ್ಲಿ ತಪ್ಪಿಲ್ಲ. ಈ ಅಯಾಚಿತ ಘಟನೆಗೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮ ರಂಗದ ಕ್ಷಮೆ ಇರಲಿ, ಒಂದು ಉತ್ತಮವಾದ ಸಮಾಜಕ್ಕೆ ಒಳ್ಳೆಯ ಮಾಧ್ಯಮಗಳ ಅಗತ್ಯವಿದೆ. ನನಗೂ ಮಾಧ್ಯಮಗಳ ಬಗ್ಗೆ ಗೌರವವಿದೆ. ಚಿತ್ರರಂಗದ ನನ್ನ ಬೆಳವಣಿಗೆಯಲ್ಲಿ ಮಾಧ್ಯಮಗಳು ಪ್ರೀತಿಯಿಂದ ನೀಡಿದ ಪ್ರಚಾರದ ಪಾಲೂ ಸಾಕಷ್ಟಿದೆ. ಈ ಹಿಂದೆ ಆಗಿರುವ ಕಹಿ ಘಟನೆಯನ್ನು ಮರೆತು ನಾವೆಲ್ಲ ಮುಂದೆ ಸಾಗೋಣ. ಕನ್ನಡ, ಕನ್ನಡಿಗರು, ಕನ್ನಡ ನೆಲ ಜಲ, ಕನ್ನಡ ಚಿತ್ರರಂಗದ ಪ್ರಗತಿಗೆ ಜೊತೆಯಾಗಿ ಕೆಲಸ ಮಾಡೋಣ. ಪ್ರೀತಿಯಿರಲಿ, ನನ್ನ ಪ್ರೀತಿಯ ಸೆಲೆಬ್ರಿಟಿಗಳು ನನ್ನ ಭಾವನೆಯನ್ನು ಗೌರವಿಸುತ್ತಾರೆ ಎಂದು ಭಾವಿಸುತ್ತೇನೆ.

    ಪ್ರೀತಿಯಂದ ದರ್ಶನ್ ತೂಗೂದೀಪ

    Share Information
    Advertisement
    Click to comment

    You must be logged in to post a comment Login

    Leave a Reply