DAKSHINA KANNADA
ಶಾಸಕ ಅಶೋಕ್ ರೈ ಸಾಧನೆ ಬ್ಯಾನರ್ ನೊಂದಿಗೆ ಬಿಜೆಪಿ ಕಾರ್ಯಕರ್ತನ ಮನೆಗೆ ನುಗ್ಗಿ ದಾಂಧಲೆ
ಪುತ್ತೂರು ಮಾರ್ಚ್ 17: ದಕ್ಷಿಣಕನ್ನಡ ಜಿಲ್ಲಾ ಬಿಜೆಪಿಯ ಸಾಮಾಜಿಕ ಜಾಲತಾಣದ ಸದಸ್ಯರೊಬ್ಬರ ಮನೆಗೆ ತಂಡವೊಂದು ದಾಳಿ ನಡೆಸಿ ದಾಂಧಲೆ ನಡೆಸಿದ ಘಟನೆ ಪುತ್ತೂರು ತಾಲೂಕಿನ ತಾರಿಗುಡ್ಡೆಯಲ್ಲಿ ನಡೆದಿದೆ. ಈ ಕುರಿತಂತೆ ಪುತ್ತೂರು ಪೊ ಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಿಜೆಪಿಯ ಸಾಮಾಜಿಕ ಜಾಲತಾಣದ ಸದಸ್ಯ ಜಯಾನಂದ . ಕೆ. ಅವರ ಮನೆಗೆ ಪುತ್ತೂರು ಶಾಸಕ ಅಶೋಕ್ ರೈ ಬೆಂಬಲಿಗರು ಎನ್ನಲಾದ ಪ್ರಜ್ವಲ್ ರೈ ಹಾಗೂ ಅವರ ತಂಡ ಕಾಂಗ್ರೇಸ್ ಸರಕಾರದ ಅನುದಾನಕ್ಕೆ ಸಂಬಂಧಿಸಿದಂತೆ ಬ್ಯಾನರ್ ವೊಂದನ್ನು ಹಿಡಿದು ಮನೆ ನುಗ್ಗಿ ಜೀವ ಬೇದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಅವರು ಅನುದಾನ ಹಂಚಿಕೆ ವಿಚಾರದಲ್ಲಿ ನಡೆದ ಕಿರಿಕ್ ಈ ಘಟನೆಗೆ ಕಾರಣ ಎಂದು ಹೇಳಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪುತ್ತೂರು ಶಾಸಕರು ಅತೀ ಹೆಚ್ಚು ಅನುದಾನ ತಂದಿದ್ದಾರೆ ಅನ್ನೋ ಕುರಿತು ಸ್ಪಷ್ಟನೆ ನೀಡುವಂತೆ ಬಿಜೆಪಿ ಕಾರ್ಯಕರ್ತರು ಪೋಸ್ಟ್ ಹಾಕಿದ್ದರು. ಇದೇ ವಿಚಾರಕ್ಕೆ ಶಾಸಕ ಅಶೋಕ್ ರೈ ಬೆಂಬಲಿಗರೆನ್ನಲಾದ ತಂಡ ಬಿಜೆಪಿಯ ಜಯಾನಂದ ಅವರ ಮನೆಗೆ ನುಗ್ಗಿ ಚೆಂಡೆ ವಾಲಗದ ಮೂಲಕ ಕಾಂಗ್ರೆಸ್ ನ ಅನುದಾನದ ಬ್ಯಾನರ್ ಹಿಡಿದು ನುಗ್ಗಿದೆ. ಅಲ್ಲದೆ ಅಲ್ಲಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಜೀವಬೇದರಿಕೆ ಕೂಡ ಹಾಕಲಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿಲಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬೃಜೇಶ್ ಚೌಟ ಈ ಘಟನೆಯನ್ನು ಖಂಡಿಸಿದ್ದು, ‘ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕರ ಬಂದ ಬಳಿಕ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪೊಲಿಸರು ಯಾವುದೇ ಪ್ರಭಾವಕ್ಕೆ ಮಣಿಯದೇ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಬೇಕು‘ ಎಂದು ಒತ್ತಾಯಿಸಿದ್ದಾರೆ.
ಅರುಣ್ ಕುಮಾರ್ ಪುತ್ತಿಲ, ಜಗನ್ನಿವಾಸ್ ರಾವ್ ಸಹಿತ ಬಿಜೆಪಿ ನಾಯಕರು ಜಯಾನಂದ್ ಬಂಗೇರರ ಮನೆಗೆ ಭಾನುವಾರ ಭೇಟಿ ನೀಡಿ ಧೈರ್ಯ ತುಂಬಿದರು. ಘಟನೆಯನ್ನು ಖಂಡಿಸಿರುವ ಪುತ್ತಿಲ, ‘ಪ್ರಜಾಪ್ರಭುತ್ವ ಮತ್ತು ಸಂವಿಧಾನವು ನಾಗರಿಕರಿಗೆ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಅಧಿಕಾರ ಕೊಟ್ಟಿದೆ. ಗೂಂಡಾವರ್ತನೆ ನಡೆಸುವುದು ಎಷ್ಟು ಸರಿ. ಎಲ್ಲ ಆರೋಪಿಗಳ ವಿರುದ್ಧವೂ ಕ್ರಮವಾಗಬೇಕು’ ಎಂದು ಒತ್ತಾಯಿಸಿದ್ದಾರೆ.
ಪೊಲೀಸರು ಎರಡೂ ಕಡೆಯವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮಾಹಿತಿ ಲಭಿಸಿದೆ. ಇನ್ನು ಈ ಘಟನೆ ಬಗ್ಗೆ ಪುತ್ತೂರು ನಗರ ಬಿಜೆಪಿ ಘಟಕ ಖಂಡನೆ ವ್ಯಕ್ತಪಡಿಸಿದ್ದು, ಅಲ್ಲದೆ ಕಾಂಗ್ರೇಸ್ ಕಾರ್ಯಕರ್ತರು ಅನುದಾನದ ಬ್ಯಾನರ್ ಹಿಡಿದು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದೆ.
You must be logged in to post a comment Login