KARNATAKA
ಹಿಜಬ್ ವಿವಾದ – ಯೂಟರ್ನ್ ಹೊಡೆದ ಸಿಎಂ ಸಿದ್ದರಾಮಯ್ಯ

ಬೆಂಗಳೂರು ಡಿಸೆಂಬರ್ 23: ಶಾಲಾ ಕಾಲೇಜುಗಳಲ್ಲಿ ಇರುವ ಹಿಜಬ್ ನಿಷೇಧವನ್ನು ವಾಪಾಸ್ ಪಡೆದ ವಿಚಾರ ವಿವಾದವಾಗುತ್ತಿದ್ದಂತೆ ಇದೀಗ ಸಿಎಂ ಸಿದ್ದರಾಮಯ್ಯ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ನಾನು ಹಿಜಾಬ್ ಹಿಂದಕ್ಕೆ ಪಡೆಯುತ್ತೇನೆ ಅಂತ ಹೇಳೇ ಇಲ್ಲ ಎಂದಿದ್ದಾರೆ.
ಮೈಸೂರಿನಲ್ಲಿ ಹಿಜಾಬ್ ನಿಷೇಧ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿಎಂ, ಹಿಜಾಬ್ ನಿಷೇಧ ವಾಪಸ್ ಪಡೆಯಲು ಸರ್ಕಾರ ಚಿಂತನೆ ನಡೆಸುತ್ತಿದೆ. ಯಾವ ಶೈಕ್ಷಣಿಕ ವರ್ಷದಿಂದ ಜಾರಿ ಮಾಡ್ಬೇಕು ಅನ್ನೋ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚಿಸ್ತೇನೆ. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಿದ್ದೇವೆ ಅಂತಷ್ಟೇ ಹೇಳಿದ್ದು. ಇನ್ನೂ ನಿಷೇಧ ಮಾಡಿರೋದನ್ನು ವಾಪಸ್ ತೆಗೆದುಕೊಂಡಿಲ್ಲ ಎಂದು ವಿಪಕ್ಷಗಳ ಟೀಕೆಗೆ ಉತ್ತರಿಸಿದ್ದಾರೆ.

ಮೈಸೂರಿನಲ್ಲಿ ನಿನ್ನೆ ಮಾತನಾಡಿದ್ದ ಸಿದ್ದರಾಮಯ್ಯ, ಹಿಜಾಬ್ ಅನ್ನು ವಾಪಸ್ ತಗೊಂಡು ಬಿಡ್ತೀವಿ. ಅದು ಈಗ ಇಲ್ಲ. ನೋ ಹಿಜಾಬ್. ಹಿಜಾಬ್ ಹಾಕೊಂಡು ಹೋಗಬಹುದು ಈಗ. ಆದೇಶವನ್ನು ವಾಪಸ್ ತಗೊಳ್ಳಿ ಎಂದು ಹೇಳಿದ್ದೇನೆ. ಡ್ರಸ್ ಹಾಕೋದು, ಊಟ ಮಾಡೋದು ನಿಮಗೆ ಸೇರಿದ್ದು, ಅದಕ್ಕೆ ನಾನೇಕೆ ಅಡ್ಡಿ ಪಡಿಸಲಿ. ನೀನು ಯಾವ ಡ್ರೆಸ್ ಹಾಕ್ತಿಯಾ ಹಾಕೋ, ನೀನು ಯಾವ ಊಟ ಮಾಡ್ತಿಯಾ ಮಾಡು. ಇದೆಲ್ಲ ನನಗ್ಯಾಕೆ, ನಾನು ಊಟ ಮಾಡೋದು ನಾನು ಮಾಡ್ತೀನಿ. ನಾನು ಧೋತಿ ಮತ್ತು ಜುಬ್ಬಾ ಹಾಕೊಂತಿನಿ. ನೀನು ಪ್ಯಾಂಟ್, ಶರ್ಟ್ ಹಾಕೊಂತಿಯಾ ಹಾಕು ಎಂದಿದ್ದರು.