BANTWAL
ಗಾಂಜಾದ ಬೃಹತ್ ಜಾಲ ಪತ್ತೆಹಚ್ಚಿದ ದಕ್ಷಿಣಕನ್ನಡ ಪೋಲೀಸರು,175 ಕೆಜಿ ಗಾಂಜಾ ವಶ

ಬಂಟ್ವಾಳ ಅಗಸ್ಟ್ 11: ಬೃಹತ್ ಅಂತರ್ ರಾಜ್ಯ ಗಾಂಜಾ ಸಾಗಾಟಗಾರರ ಬೃಹತ್ ಜಾಲವನ್ನು ದಕ್ಷಿಣಕನ್ನಡ ಜಿಲ್ಲಾ ಪೋಲೀಸರು ಪತ್ತೆಹಚ್ಚಿದ್ದು, ಲಕ್ಷಾಂತರ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಸುಮಾರು 175 ಕೆ.ಜಿ ಗಾಂಜಾವನ್ನು ಬಂಟ್ವಾಳ ತಾಲೂಕಿನ ಕೇದಿಲ ಗ್ರಾಮದ ಪಾಟ್ರಕೋಡಿ ಎಂಬಲ್ಲಿ ವಶಕ್ಕೆ ಪಡೆದಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಮಂಜೇಶ್ವರ ದೂರ್ಮಕ್ಕಾಡ್ ನಿವಾಸಿ ಇಬ್ರಾಹಿಂ ಯಾನೆ ಅರ್ಷದ್ (26), ಹೊಸಂಗಡಿ ನಿವಾಸಿ ಮೊಹಮ್ಮದ್ ಶಫಿಕ್ (31), ಕನ್ಯಾನ ಗ್ರಾಮದ ಖಲಂದರ್ ಶಾಫಿ (26) ಎಂದು ಗುರುತಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ಇಂದು ಬೆಳಿಗ್ಗೆ ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕರು ತಮ್ಮ ಠಾಣಾ ಪೊಲೀಸ್ ಉಪನಿರೀಕ್ಷಕರು ಹಾಗೂ ಠಾಣಾ ಸಿಬ್ಬಂದಿಗಳೊಂದಿಗೆ ಪಾಟ್ರಕೋಡಿ ಎಂಬಲ್ಲಿ ದಾಳಿ ನಡೆಸಿದ್ದಾರೆ. ಈ ಸಂದರ್ಭ ಪಿಕಪ್ ವಾಹನ ಹಾಗೂ ಕಾರಿನಲ್ಲಿ ಅಪಾರ ಪ್ರಮಾಣದ ಗಾಂಜಾ ಪತ್ತೆಯಾಗಿದೆ. ಆರೋಪಿಗಳನ್ನು ಪಿಕಪ್ ವಾಹನ ಮತ್ತು ಕಾರಿನಲ್ಲಿ ಬರೋಬ್ಬರಿ 175 ಕೆಜಿ ಗಾಂಜಾವನ್ನು ಸಾಗಾಟ ಮಾಡಲು ಯತ್ನಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಸುಮಾರು 17,50,000 ಮೌಲ್ಯದ ಸುಮಾರು 175 ಕೆ.ಜಿ ಗಾಂಜಾ, ಸುಮಾರು ರೂ 3,00,000 ಮೌಲ್ಯದ ಪಿಕ್ ಅಪ್ ವಾಹನ, ಸುಮಾರು ರೂ 4,00,000 ಮೌಲ್ಯದ ಕಾರು ಸೇರಿದಂತೆ ಒಟ್ಟು ರೂ 24,50,000 ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಪೈಕಿ ಇಬ್ರಾಹಿಂ ಎಂಬಾತನ ವಿರುದ್ದ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ 7 ಪ್ರಕರಣ, ಕುಂಬಳೆ ಠಾಣೆಯಲ್ಲಿ 2 ಪ್ರಕರಣ ಹಾಗೂ ಖಲಂದರ್ ಶಾಫಿ ಎಂಬಾತನ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ 2 ಅಕ್ರಮ ಗಾಂಜಾ ಪ್ರಕರಣ ಹಾಗೂ 1 ಕೊಲೆ ಯತ್ನ ಪ್ರಕರಣ ಮತ್ತು ಕಾವೂರು ಠಾಣೆಯಲ್ಲಿ 1 ಅಕ್ರಮ ಗಾಂಜಾ ಸಾಗಾಟ ಪ್ರಕರಣ ದಾಖಲಾಗಿದೆ.