LATEST NEWS
ಫಾಝಿಲ್ ಕುಟುಂಬಕ್ಕೂ ಪರಿಹಾರ ಸಿಗಬೇಕು – ಶಾಸಕ ಭರತ್ ಶೆಟ್ಟಿ
ಮಂಗಳೂರು ಜನವರಿ 31: ಸುರತ್ಕಲ್ ನಲ್ಲಿ ಹತ್ಯೆಗೀಡಾದ ಫಾಝಿಲ್ ನ ಕುಟುಂಬದವರಿಗೂ ಪರಿಹಾರ ಸಿಗಲಿದ್ದು, ಪರಿಹಾರ ನೀಡಲು ಸಿದ್ದಪಡಿಸಿದ ಪಟ್ಟಿಯಲ್ಲಿ ಫಾಝಿಲ್ ಕುಟುಂಬದವರೂ ಇದ್ದಾರೆ ಎಂದು ಶಾಸಕ ಭರತ್ ಶೆಟ್ಟಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು ಫಾಝಿಲ್ ಹತ್ಯೆ ಸಂದರ್ಭ ಮನೆಗೆ ಭೇಟಿ ನೀಡಬೇಕೆಂದು ಯೋಚಿಸಿದ್ದೆ ಆದರೆ ನನ್ನ ಭೇಟಿ ವೇಳೆ ಗಲಾಟೆ ನಡೆಸಲು ಸಂಚು ರೂಪಿಸಿದ್ದ ಬಗ್ಗೆ ಮಾಹಿತಿ ಬಂದಿತ್ತು. ಈ ಹಿಂದೆ ದೀಪಕ್ರಾವ್ ಹಾಗೂ ಇನ್ನೊಬ್ಬ ವ್ಯಕ್ತಿ ಸತ್ತಾಗ ಸಂತ್ರಸ್ತರ ಮನೆಗೆ ಶಾಸಕರು ಭೇಟಿ ನೀಡಿದಾಗಲೂ ಘೆರಾವ್ ಹಾಕಲಾಗಿತ್ತು. ನನ್ನ ಭೇಟಿಯು ಮತ್ತಷ್ಟು ಗಲಾಟೆಯನ್ನು ಉಂಟುಮಾಡುವುದು ಬೇಡ ಎಂಬ ಕಾರಣಕ್ಕೆ ನಾನು ಅವರ ಮನೆಗೆ ಹೋಗಿಲ್ಲ’ ಎಂದು ಸ್ಪಷ್ಟನೆ ನೀಡಿದರು. ಬಳಿಕ ಪರಿಸ್ಥಿತಿ ತಿಳಿಯಾದಾಗ ಹೋಗಿ ಪರಿಹಾರ ಘೋಷಿಸಬಹುದಿತ್ತಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಅವರ ಕುಟುಂಬದವರು ಯಾರೂ ಪರಿಹಾರದ ಬಗ್ಗೆ ನನ್ನ ಬಳಿ ಬೇಡಿಕೆ ಇಟ್ಟಿಲ್ಲ. ಅವರು ಕೇಳಬೇಕೆಂದೂ ಇಲ್ಲ. ಪರಿಹಾರ ನೀಡಲು ಸಿದ್ಧಪಡಿಸಿದ್ದ ಪಟ್ಟಿಯಲ್ಲಿ ಫಾಝಿಲ್ ಕುಟುಂಬದ ಹೆಸರೂ ಇದೆ. ಅವರಿಗೂ ಪರಿಹಾರ ಸಿಗಲಿದೆ’ ಎಂದರು.
ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿಯೇ ಫಾಝಿಲ್ ಹತ್ಯೆಯನ್ನು ನಡೆಸಲಾಗಿದೆ. ನಮ್ಮವರೇ ಈ ಕೃತ್ಯ ಮಾಡಿದ್ದಾರೆ’ ಎಂದು ವಿಶ್ವಹಿಂದೂ ಪರಿಷತ್ನ ಮುಖಂಡ ಶರಣ್ ಪಂಪ್ವೆಲ್ ಬಹಿರಂಗ ಹೇಳಿಕೆ ನೀಡಿದ ಕುರಿತು ಪ್ರತಿಕ್ರಿಯಿಸಲು ಭರತ್ ಶೆಟ್ಟಿ ನಿರಾಕರಿಸಿದರು.‘ಅವರು ಏನು ಹೇಳಿಕೆ ನೀಡಿದ್ದಾರೋ ನಾನು ನೋಡಿಲ್ಲ. ಹಾಗಾಗಿ ಪ್ರತಿಕ್ರಿಯೆ ನೀಡುವುದು ಸರಿಯಾಗದು’ ಎಂದರು.
You must be logged in to post a comment Login