KARNATAKA
ಸೆಪ್ಟೆಂಬರ್ 1 ರಿಂದ ದೇವಸ್ಥಾನಗಳಲ್ಲಿ ಎಲ್ಲಾ ಸೇವೆ ಆರಂಭಕ್ಕೆ ಚಿಂತನೆ
ಬೆಂಗಳೂರು: ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ಸೆಪ್ಟೆಂಬರ್ 1 ರಿಂದ ಎಲ್ಲಾ ರೀತಿಯ ಸೇವೆಗಳನ್ನು ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಕೊರೊನಾ ಸಂದರ್ಭ ರಾಜ್ಯದ ಎಲ್ಲಾ ದೇವಸ್ಥಾನಗಳಿಗೂ ಭಕ್ತರ ಪ್ರವೇಶ ನಿಷೇಧ ಹಾಗೂ ಕೆಲವೊಂದು ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ನಂತರ ಅನ್ಲಾಕ್ ಸಂದರ್ಭ ದೇವಸ್ಥಾನಗಳಲ್ಲಿ ಭಕ್ತರಿಗೆ ಕೇವಲ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಆದರೆ ದೇವಸ್ಥಾನಕ್ಕೆ ಭಕ್ತರೆ ಆಗಮಿಸದೆ ರಾಜ್ಯದ ಬೊಕ್ಕಸಕ್ಕೂ ಭಾರೀ ಪ್ರಮಾಣದ ಆದಾಯ ಖೋತಾ ಆಗಿತ್ತು.
ಈಗಾಗಲೇ ಸಪ್ಟೆಂಬರ್ 1 ರಿಂದ ಅನ್ ಲಾಕ್ 4.0 ಜಾರಿಯಾಗುವ ಸಾಧ್ಯತೆ ಇರುವ ಹಿನ್ನಲೆ ಈ ಮೂಲಕ ಭಕ್ತರಿಗೆ ಮುಜರಾಯಿ ಇಲಾಖೆಯಿಂದ ಗುಡ್ ನ್ಯೂಸ್ ದೊರೆತಿದ್ದು, ಇನ್ನು ಮುಂದೆ ದೇವಸ್ಥಾನಗಳಲ್ಲಿ ಮಾಮೂಲಿ ಪೂಜೆ ನಡೆಯಲಿದೆ. ಅದು ಕೂಡ ಕೊರೊನಾ ಮಾರ್ಗಸೂಚಿ ಅನ್ವಯವೇ ಎಲ್ಲಾ ಸೇವೆಗಳು ಲಭ್ಯವಾಗಲಿವೆ ಎಂದು ಹೇಳಲಾಗಿದೆ.
ಹೀಗಾಗಿ ಸೆಪ್ಟೆಂಬರ್ 1ರಿಂದಲೇ ದೇವಸ್ಥಾನಗಳಲ್ಲಿ ಎಲ್ಲಾ ಸೇವೆ ಆರಂಭಕ್ಕೆ ಚಿಂತನೆ ನಡೆಸಲಾಗಿದೆ. ಈಗಿದ್ದ ಸೀಮಿತ ಸೇವೆಗಳ ಜೊತೆಗೆ ಹೆಚ್ಚುವರಿ ಸೇವೆಗಳ ಆರಂಭ ಮಾಡುವ ಸಾಧ್ಯತೆಯೂ ಇದೆ. ಕ್ಷೀರಾಭಿಷೇಕ, ಕುಂಕುಮಾರ್ಚನೆ, ತುಲಾಭಾರ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಉರುಳು ಸೇವೆ ಹಾಗೂ ಮುಡಿ ಸೇವೆ ಆರಂಭಕ್ಕೆ ಚಿಂತನೆ ಮಾಡಲಾಗಿದೆ. ಈ ವಿಚಾರವನ್ನು ಮುಜರಾಯಿ ಇಲಾಖೆ ಈಗಾಗಲೇ ಸರ್ಕಾರದ ಮುಂದೆ ಪ್ರಸ್ತಾಪ ಮಾಡಿದೆ. ಸರ್ಕಾರ ಒಪ್ಪಿದ್ರೆ ಸದ್ಯದಲ್ಲೇ ದೇವಸ್ಥಾನಗಳಲ್ಲಿ ಎಲ್ಲಾ ಸೇವೆಗೆ ಅವಕಾಶ ನೀಡಲಾಗುವುದು.
You must be logged in to post a comment Login