KARNATAKA
ಬೆಳಗಾವಿ : ರಾಜ್ಯೋತ್ಸವ ಮುಗಿಸಿ ಮನೆಗೆ ವಾಪಸಾಗುತ್ತಿದ್ದಾಗ ಬೈಕ್ ಡಿಕ್ಕಿ: ಇಬ್ಬರು ಮೃತ್ಯು, ಮತ್ತಿಬ್ಬರು ಗಂಭೀರ..!
ಬೆಳಗಾವಿ: ಬೆಳಗಾವಿಯಿಂದ ರಾಜ್ಯೋತ್ಸವ ಮುಗಿಸಿಕೊಂಡು ಮರಳುತ್ತಿದ್ದಾಗ ಪಾದಚಾರಿಗಳಿಗೆ ಬೈಕ್ ಡಿಕ್ಕಿ ಹೊಡೆದಿದ್ದು ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟರೆ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಿತ್ತೂರು ತಾಲ್ಲೂಕಿನ ಎಂ.ಕೆ.ಹುಬ್ಬಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ತಡ ರಾತ್ರಿ ಈ ದುರ್ಘಟನೆ ಸಂಭವಿಸಿದೆ.
ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ 1.30 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಮೃತರನ್ನು ಧಾರವಾಡ ಜಿಲ್ಲೆಯ ನರೇಂದ್ರದ ಲಬೈಕ್ ಹಲಸಿಗರ ಹಾಗೂ ಬೆಳಗಾವಿ ತಾಲ್ಲೂಕಿನ ಬಾಳೇಕುಂದ್ರಿ ಗ್ರಾಮದ ಶ್ರೀನಾಥ ಗುಜನಾಳ ಎಂದು ಗುರುತಿಸಲಾಗಿದೆ. ಧಾರವಾಡ ನಗರದ ಅಲ್ತಾಫ್ ನಾಲಬಂದ ಹಾಗೂ ಕಡತನ ಬಾಗೇವಾಡಿಯ ಅರ್ಜುನ ರಂಗಣ್ಣವರ ತೀವ್ರವಾಗಿ ಗಾಯಗೊಂಡ ಯುವಕರು. ಇವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ 300 ಮೀಟರ್ ದೂರದಲ್ಲಿ ದೊರೆತಿದೆ.
ಇಬ್ಬರು ಯುವಕರು ಬೈಕ್ನಲ್ಲಿ ವೇಗವಾಗಿ ಸಂಚರಿಸುತ್ತಿದ್ದರು. ಹೆದ್ದಾರಿ ಪಕ್ಕದ ಹೋಟೆಲ್ನಲ್ಲಿ ಊಟ ಮಾಡಿದ ನಂತರ ಹೆದ್ದಾರಿ ದಾಟುತ್ತಿದ್ದ ಪಾದಚಾರಿಗಳಿಗೆ ಬೈಕ್ ಗುದ್ದಿದೆ. ಘಟನೆಯಲ್ಲಿ ಓರ್ವ ಬೈಕ್ ಸವಾರ ಹಾಗೂ ಓರ್ವ ಪಾದಚಾರಿ ಮೃತಪಟ್ಟಿದ್ದಾರೆ. ಕಿತ್ತೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ.
You must be logged in to post a comment Login