LATEST NEWS
ಬ್ಯಾಂಕ್ ಗಳಿಗೆ ವಂಚನೆ – ಉದ್ಯಮಿ ಬಿ.ಆರ್ ಶೆಟ್ಟಿಯ ಪ್ರಪಂಚಾದ್ಯಂತ ಇರುವ ಆಸ್ತಿಗಳ ಮುಟ್ಟುಗೋಲಿಗೆ ಲಂಡನ್ ಕೋರ್ಟ್ ಸೂಚನೆ

ಲಂಡನ್ : ವಿದೇಶಗಳಲ್ಲಿ ವಿವಿಧ ಬ್ಯಾಂಕ್ಗಳಿಂದ ಸಾಲ ಪಡೆದುಕೊಂಡು ಮಾರುಪಾವತಿ ಮಾಡಲು ವಿಫಲವಾಗಿರುವ, ಕರ್ನಾಟಕ ಮೂಲದ ದುಬೈ ಉದ್ಯಮಿ ಬಿ.ಆರ್ ಶೆಟ್ಟಿಯವರ ಪ್ರಪಂಚಾದ್ಯಂತ ಇರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಿ ಎಂದು ಲಂಡನ್ ನ್ಯಾಯಾಲಯ ಆದೇಶಿಸಿದೆ.
ಬಿ.ಆರ್.ಶೆಟ್ಟಿ ಅಬುಧಾಬಿ ಮೂಲದ ಎನ್ಎಂಸಿ ಹೆಲ್ತ್ಕೇರ್ ಸ್ಥಾಪಕರಾಗಿದ್ದು, ದುಬೈನ ಭಾರೀ ದೊಡ್ಡ ಆರೋಗ್ಯ ಸೇವಾ ಕಂಪನಿಯಾಗಿರುವ ಎನ್ಎಂಸಿ ಹೆಲ್ತ್ ಕೇರ್ನ ಮಾಜಿ ಮಾಲೀಕರಾಗಿರುವ ಬಿ.ಆರ್ ಶೆಟ್ಟಿ, ಸಂಸ್ಥಾಪಕ ಖಲೀಫಾ ಅಲ್ ಮುಹೈರಿ ಹಾಗೂ ಸಯೀದ್ ಅಲ್ ಖುಬೈಸಿ, ಮಾಜಿ ಕಾರ್ಯ ನಿರ್ವಾಹಕ ಪ್ರಶಾಂತ್ ಮಂಗತ್ ಮತ್ತು ಇನ್ನಿಬ್ಬರು ಹಿರಿಯ ಅಧಿಕಾರಿಗಳ ಆಸ್ತಿಗಳ ಮುಟ್ಟುಗೋಲು ಹಾಕಲು ನ್ಯಾಯಾಲಯ ಆದೇಶಿಸಿದೆ.

ಲಂಡನ್ ನ್ಯಾಯಾಲಯದ ಈ ಆದೇಶದಿಂದಾಗಿ ಕೇರಳ ಸಹಿತ, ವಿಶ್ವದ ವಿವಿಧ ಭಾಗಗಳಲ್ಲಿ ಇರುವ ಬಿ.ಆರ್ ಶೆಟ್ಟಿಗೆ ಸೇರಿದ ಆಸ್ತಿ ಬ್ಯಾಂಕ್ ಪಾಲಾಗಲಿದೆ. ಬಿ.ಆರ್ ಶೆಟ್ಟಿ ಒಡೆತನದ ಕಂಪನಿ ಬ್ಯಾಂಕ್ ಒಂದರಿಂದ ನಾಲ್ಕು ಬಿಲಿಯನ್ ಡಾಲರ್ಗೂ ಅಧಿಕ ಸಾಲ ಪಡೆದು, ಹಿಂದಿರುಗಿಸಲು ವಿಫಲವಾಗಿತ್ತು. ಅಲ್ಲದೇ ನಕಲಿ ಹಣಕಾಸು ದಾಖಲೆಗಳನ್ನು ಒದಗಿಸುವ ಮೂಲಕ ಮೋಸ ಎಸಗಲಾಗಿತ್ತು.
ಇದರೊಂದಿಗೆ ಬಿ.ಆರ್.ಶೆಟ್ಟಿ ಮತ್ತು ಪ್ರಶಾಂತ್ ಮಂಗತ್ ಅವರು ತಮ್ಮ ಆಸ್ತಿಯನ್ನು ವಿಶ್ವದ ಎಲ್ಲಿಯೂ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಈ ಹಿಂದೆ ಯುಎಇಯಲ್ಲಿ ಶೆಟ್ಟಿ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಬಿ.ಆರ್ ಶೆಟ್ಟಿ ಭಾರತಕ್ಕೆ ಬಂದಿದ್ದಾರೆ. ಲಂಡನ್ ಕೋರ್ಟ್ನ ಈ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.