Connect with us

    LATEST NEWS

    ಸಮುದ್ರಕ್ಕೆ ಪ್ಲಾಸ್ಟಿಕ್ ಸೇರದಂತೆ ತಡೆಯಲು 840 ಕೋಟಿ ರೂಪಾಯಿ ಯೋಜನೆ…!!

    ಉಡುಪಿ, ಆಗಸ್ಟ್ 9 : ಕಡಲನ್ನು ಸೇರುತ್ತಿರುವ ಮತ್ತು ಕಡಲ ತೀರ ಆವರಿಸುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ ಹಲವು ಜಲಚರಗಳ ಸಾವಿಗೆ ಕಾರಣವಾಗುತ್ತಿದ್ದು, ಪ್ಲಾಸ್ಟಿಕ್ ಸಮುದ್ರ ಸೇರದಂತೆ ನಿಗ್ರಹಿಸುವ ಮತ್ತು ಪಶ್ಚಿಮಘಟ್ಟದ ಜೀವವೈವಿಧ್ಯ ಸಂರಕ್ಷಿಸುವ ನಿಟ್ಟಿನಲ್ಲಿ ವಿಶ್ವಬ್ಯಾಂಕ್ ಪ್ರಸ್ತಾಪಿತ ಕೆ.ಶೂರು – ಬ್ಲೂ ಪ್ಯಾಕ್ ಯೋಜನೆಗೆ ಸಮರ್ಪಕವಾದ ವಿಸ್ತೃತ ಯೋಜನಾ ವರದಿ (ಡಿ.ಪಿ.ಆರ್) ಸಿದ್ಧಪಡಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಪರಿಸರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.


    ಇಂದು ತಮ್ಮ ಕಾರ್ಯಾಲಯದಲ್ಲಿ ಹಿರಿಯ ಪರಿಸರ ಅರ್ಥಶಾಸ್ತ್ರಜ್ಞ ಮತ್ತು ಕಾರ್ಯ ಗುಂಪಿನ ನಾಯಕ ಪಾಬ್ಲೋ ಸಿ. ಬೆನಿಟೆಜ್ ನೇತೃತ್ವದ ವಿಶ್ವಬ್ಯಾಂಕ್ ನಿಯೋಗದೊಂದಿಗೆ ಸಮಾಲೋಚನೆ ನಡೆಸಿದ ಸಚಿವರು, 317 ಕಿಲೋ ಮೀಟರ್ ಕರುನಾಡ ಕರಾವಳಿಯಲ್ಲಿ ಪ್ರತಿನಿತ್ಯ 50 ಟನ್ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗುತ್ತಿದೆ ಎಂಬುದು ಆಘಾತಕಾರಿ ಅಂಶವಾಗಿದ್ದು, ಇದರಿಂದ ಸಮುದ್ರ ತಟಕ್ಕೆ ಬಂದು ಮೊಟ್ಟೆ ಇಟ್ಟು ಮರಿ ಮಾಡುವ ಆಮೆ, ಮೊದಲಾದ ಜಲಚರಗಳ ಸಂತಾನೋತ್ಪತ್ತಿಗೆ ಬಾಧಕವಾಗುತ್ತಿದೆ ಎಂಬ ಅಂಶದ ಬಗ್ಗೆ ಸಚಿವರು ವ್ಯಾಕುಲ ವ್ಯಕ್ತಪಡಿಸಿದರು.

    ಮಾನವರ ಮತ್ತು ಸಮಸ್ತ ಜೀವಸಂಕುಲದ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿರುವ ಏಕ ಬಳಕೆ ಪ್ಲಾಸ್ಟಿಕ್ ನಿಯಂತ್ರಿಸುವ ಅಗತ್ಯ ಹಿಂದೆಂದಿಗಿಂತ ಇಂದು ಹೆಚ್ಚಿದೆ ಎಂದು ಪ್ರತಿಪಾದಿಸಿದ ಸಚಿವರು, ಕರುನಾಡ ಕರಾವಳಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯದಿಂದ ಆಗುತ್ತಿರುವ ದುಷ್ಪರಿಣಾಮ ತಗ್ಗಿಸುವ ನಿಟ್ಟಿನಲ್ಲಿ ಈ ಯೋಜನೆ ಸಹಕಾರಿ ಆಗಬಹುದು ಎಂದು ತಿಳಿಸಿದರು. ನಿಯೋಗದಲ್ಲಿದ್ದ ಸದಸ್ಯರು ಕರಾವಳಿಯಲ್ಲಿರುವ ಮೀನುಗಾರರು, ಮೀನುಗಾರಿಕೆಗೆ ವಿರಾಮವಿದ್ದ ಸಂದರ್ಭದಲ್ಲಿ ಕಡಲತಡಿಯಲ್ಲಿ ಸಂಗ್ರಹವಾದ ಪ್ಲಾಸ್ಟಿಕ್ ತ್ಯಾಜ್ಯ ತೆರವು ಮಾಡಬಹುದು. ಮೀನು ಹಿಡಿಯುವುದಕ್ಕಿಂತ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವೇ ಅವರಿಗೆ ಹೆಚ್ಚು ಲಾಭದಾಯಕ ಆಗುತ್ತದೆ ಎಂದು ತಿಳಿಸಿದರು. ಬ್ಲೂ ಪ್ಯಾಕ್ ಯೋಜನೆಯ ಒಟ್ಟು ಮೊದ್ದ 840 ಕೋಟಿ ರೂ. ಆಗಿದ್ದು, ಇದರಲ್ಲಿ ಶೇ.70 ರಷ್ಟನ್ನು ವಿಶ್ವಬ್ಯಾಂಕ್ ಸಾಲದ ರೂಪದಲ್ಲಿ ನೀಡಲಿದೆ. ರಾಜ್ಯ ಸರ್ಕಾರ ಶೇ.30 ರಷ್ಟು ಭರಿಸಬೇಕಾಗುತ್ತದೆ. ಪ್ರಾಥಮಿಕ ಯೋಜನಾ ವರದಿ (ಪಿಪಿಆರ್)ಗೆ ನೀತಿ ಆಯೋಗ ಮತ್ತು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಬೆಂಬಲವಿದೆ ಎಂದು ಅಧಿಕಾರಿಗಳು ವಿವರಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply