DAKSHINA KANNADA
ಕುಕ್ಕೆ ಸುಬ್ರಹ್ಮಣ್ಯ – ಅಸ್ವಸ್ಥಗೊಂಡಿದ್ದ ಕಾಡಾನೆ ಸಾವು
ಸುಳ್ಯ ಎಪ್ರಿಲ್ 28: ಕಳೆದ ಕೆಲವು ದಿನಗಳಿಂದ ಅಸ್ವಸ್ಥಗೊಂಡು ಸಂಚಾರ ಮಾಡುತ್ತಿದ್ದ ಕಾಡಾನೆ ಸಾವನಪ್ಪಿದೆ. ಸುಬ್ರಹ್ಮಣ್ಯದ ಕೆಂಜಾಳ, ಎರ್ಮಾಯಿಲ್ ಪರಿಸರದಲ್ಲಿ ಈ ಆನೆ ಸಂಚಾರ ಮಾಡುತ್ತಿತ್ತು. ಗುರುವಾರ ಈ ಕಾಡಾನೆ ಸಂಪೂರ್ಣವಾಗಿ ನಿತ್ರಾಣವಾದ ಸ್ಥಿತಿಯಲ್ಲಿ ಚೇರು ಎಂಬಲ್ಲಿ ಹಳ್ಳವೊಂದರಲ್ಲಿ ಪತ್ತೆಯಾಗಿತ್ತು.
ನಿಶ್ಶಕ್ತಿಯಿಂದಾಗಿ ಮೇಲೆ ಬರಲು ಸಾಧ್ಯವಾಗದೇ ಹೊಳೆಯಲ್ಲಿಯೇ ನಿಂತಿದ್ದ ಆನೆಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಪಶು ವೈದ್ಯಾಧಿಕಾರಿಗಳನ್ನು ಸ್ಥಳಕ್ಕೆ ಕರೆಸಲಾಗಿತ್ತು. ಆನೆಯನ್ನು ಪರಿಶೀಲಿಸಿದ ಅವರು ಅದಕ್ಕೆ ಸುಮಾರು 50 ವರ್ಷ ಪ್ರಾಯವಾಗಿದ್ದು, ಬಾಯಿಯಲ್ಲಿ ಗಾಯವಾಗಿರುವಂತಿದೆ. ವಯಸ್ಸು ಮತ್ತು ಅನಾರೋಗ್ಯದ ಕಾರಣ ಅದಕ್ಕೆ ಸರಿಯಾಗಿ ಆಹಾರ ಸೇವಿಸಲು ಸಾಧ್ಯವಾಗುತ್ತಿಲ್ಲ. ಚಿಕಿತ್ಸೆ ನೀಡಬೇಕಾದರೆ ಅರಿವಳಿಕೆ ನೀಡಿ ಪ್ರಜ್ಞೆ ತಪ್ಪಿಸಬೇಕಿದೆ. ಆದರೆ ಅದು ಅರಿವಳಿಕೆಯನ್ನು ತಡೆದುಕೊಳ್ಳಲು ಸಾಧ್ಯವಾಗದಷ್ಟು ನಿಶ್ಶಕ್ತವಾಗಿರುವುದರಿಂದಾಗಿ ಅರಿವಳಿಕೆ ಪ್ರಯೋಗ ಸಾಧ್ಯವಿಲ್ಲ. ಒಂದು ವೇಳೆ ಈ ಸ್ಥಿತಿಯಲ್ಲಿ ಅರಿವಳಿಕೆ ಪ್ರಯೋಗಿಸಿದರೆ ಅದರ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದರು.
ಆನೆ ಸಂಜೆಯ ವೇಳೆಗೆ ಕಷ್ಟುಪಟ್ಟು ಹೊಳೆಯಿಂದ ಮೇಲಕ್ಕೆ ಬಂದು ಅರಣ್ಯದೊಳಕ್ಕೆ ಹೋಗಿತ್ತು. ಆದರೆ ಶುಕ್ರವಾರ ಬೆಳಗ್ಗೆ ಬಗ್ಪುಣಿಯಲ್ಲಿ ಆನೆಯ ಮೃತ ಶರೀರ ಪತ್ತೆಯಾಗಿದೆ.
You must be logged in to post a comment Login