LATEST NEWS
ಗೃಹ ಸಚಿವ ಜಿ.ಪರಮೇಶ್ವರ್ ಜೊತೆಗೆ ಮುಸ್ಲಿಂ ಮುಖಂಡರ ಮಾತುಕತೆಯ ವಿವರದ ಆಡಿಯೋ ವೈರಲ್

ಮಂಗಳೂರು ಮೇ 03: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಜಿಲ್ಲೆಯ ಕಾನೂನು ಸುವ್ಯವಸ್ಥೆ ಕುರಿತಂತೆ ಸಭೆ ನಡೆಸಲು ಮಂಗಳೂರಿಗೆ ಆಗಮಿಸಿದ್ದ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರನ್ನು ದ.ಕ.ಜಿಲ್ಲೆಯ ಕಾಂಗ್ರೆಸ್ ನ ಮುಸ್ಲಿಂ ಮುಖಂಡರು ತರಾಟೆಗೆ ತೆಗೆದುಕೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ. ಗೃಹ ಸಚಿವ ಜಿ.ಪರಮೇಶ್ವರ್ ಜೊತೆಗೆ ಮುಸ್ಲಿಂ ಮುಖಂಡರ ಮಾತುಕತೆ ಸಂದರ್ಭದಲ್ಲಿ ನಡೆದ ಮಾತುಕತೆಯ ವಿವರನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ಮುಸ್ಲಿಂ ಮುಖಂಡನೋರ್ವ ತಿಳಿಸಿರುವ ಆಡಿಯೋ ಒಂದು ವೈರಲ್ ಆಗಿದೆ.
ಇಂದು ನಗರದ ಸರ್ಕ್ಯೂಟ್ ಹೌಸ್ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಮ್ಮುಖ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪಕ್ಷದ ಕಾರ್ಯಕರ್ತರ ಅಹವಾಲು ಆಲಿಸುತ್ತಿದ್ದರು. ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಕೆ.ಕೆ.ಶಾಹುಲ್ ಹಮೀದ್, ಮಾಜಿ ಮೇಯರ್ ಕೆ. ಅಶ್ರಫ್, ಸುಹೈಲ್ ಕಂದಕ್ ಮತ್ತಿತರರು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಕೂಡ ಮುಸ್ಲಿಮರಿಗೆ ಅನ್ಯಾಯವಾಗುತ್ತಿದೆ. ಪೊಲೀಸ್ ಇಲಾಖೆಯು ಸಂಘಪರಿವಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಮುಸ್ಲಿಮರ ಕೊಲೆ, ಕೊಲೆಯತ್ನ ಪ್ರಕರಣಗಳು ಹೆಚ್ಚುತ್ತಿವೆ ಎಂದು ಅಸಮಾನ ವ್ಯಕ್ತಪಡಿಸಿದರು. ಈ ವೇಳೆ ನಡೆದ ಮಾತುಕತೆಯ ವಿವರವನ್ನು ಆಡಿಯೋ ಮೆಸೆಜ್ ಮಾಡಿ ಕಾಂಗ್ರೇಸ್ ನ ಮುಖಂಡರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಸದ್ಯ ಆಡಿಯೋ ವೈರಲ್ ಆಗಿದೆ.

ಈ ಆಡಿಯೋದಲ್ಲಿ ಸುಹಾಸ್ ಶೆಟ್ಟಿ ಮನೆಗೆ ಸಾಂತ್ವಾನ ಹೇಳಲು ಯಾವೊಬ್ಬ ಕಾಂಗ್ರೆಸ್ ಮುಖಂಡ ಹೋಗಬಾರದೆಂದು ಎಚ್ಚರಿಕೆ ನೀಡಲಾಗಿದೆ. ಒಂದುವೇಳೆ ಯಾರಾದರೂ ಭೇಟಿ ನೀಡಿದರೆ ಮುಸ್ಲಿಂ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡುವ ಎಚ್ಷರಿಕೆ ನೀಡಲಾಗಿದೆ. ಮುಸ್ಲಿಮರ ವಿರುದ್ಧ ನಡೆ ತೆಗೆದುಕೊಂಡರೆ ವಕ್ಫ್ ಕಾನೂನು ವಿರೋಧಿ ಪ್ರತಿಭಟನೆ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿರುವುದಾಗಿ ಮಾಹಿತಿ ಹಂಚಿಕೊಂಡಿದಾರೆ.
ಪ್ರತಿಭಟನೆಯನ್ನು ಮಂಗಳೂರಿನ ಷಾ ಮೈದಾನದಲ್ಲಿ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಸುಹಾಸ್ ಶೆಟ್ಟಿ ಕೊಲೆಯ ಬಳಿಕ ಹಲವರ ಮೇಲೆ ಚೂರಿ ಇರಿತ ನಡೆದಿದ್ದು, ಅವರನ್ನೆಲ್ಲಾ ಬಂಧಿಸಿ ಕಾನೂನಿನ ಶಿಕ್ಷೆಗೆ ಒಳಪಡಿಸಬೇಕು ಎಂದು ಕಾಂಗ್ರಸ್ ಕಾರ್ಯಕರ್ತರಿಗೆ ಮುಸ್ಲಿಂ ಮುಖಂಡ ಮಾಹಿತಿ ನೀಡಿದ್ದಾನೆ. ಸದ್ಯ ಈ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ.
1 Comment