LATEST NEWS
ತಿರುವನಂತಪುರಂ ಭೀಕರ ಹತ್ಯಾಕಾಂಡ – 2 ಗಂಟೆಯೊಳಗೆ ತನ್ನ ಕುಟುಂಬದ 5 ಮಂದಿಯನ್ನು ಕೊಲೆಗೈದು ವಿಷ ಸೇವಿಸಿ ಪೊಲೀಸರಿಗೆ ಶರಣಾದ ಕೊಲೆಗಡುಕ

ತಿರುವನಂತಪುರಂ ಫೆಬ್ರವರಿ 25: ಕೇರಳದ ತಿರುವನಂತಪುರಂ ನಲ್ಲಿ ಭೀಕರ ಹತ್ಯಾಕಾಂಡವೇ ನಡೆದು ಹೋಗಿದ್ದು 2 ಗಂಟೆಯೊಳಗೆ ತನ್ನ ಕುಟುಂಬದ 6 ಮಂದಿಯನ್ನು ಕೊಲೆಗೈದು ವಿಷ ಸೇವಿಸಿ ಕೊನೆಗೆ ಪೊಲೀಸರಿಗೆ ಶರಣಾಗಿದ್ದಾನೆ. ರಾಜ್ಯ ರಾಜಧಾನಿ ತಿರುವನಂತಪುರಂ ಬಳಿಯ ವೆಂಜರಮೂಡು ಪ್ರದೇಶದಲ್ಲಿ ಈ ಹತ್ಯಾಕಾಂಡ ನಡೆದಿದೆ. ಇಲ್ಲಿನ ಮೂರು ಮನೆಗಳಲ್ಲಿ ವಾಸಿಸುತ್ತಿದ್ದ ಕುಟುಂಬಸ್ಥರನ್ನು ಅಫಾನ್ ಎಂಬಾತ ಹತ್ಯೆ ಮಾಡಿ, ತಾನೇ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಮೊದಲಿಗೆ ಆತ ಸೋಮವಾರ ಮಧ್ಯಾಹ್ನದ ಸಂದರ್ಭ ಪಂಗೋಡೆಯಲ್ಲಿ ವಾಸಿಸುತ್ತಿದ್ದ ತನ್ನ ಅಜ್ಜಿ ಸಲ್ಮಾ ಬೀವಿ (88) ಅನ್ನು ಆಕೆಯ ನಿವಾಸದಲ್ಲಿ ಕೊಚ್ಚಿ ಹತ್ಯೆಗೈದಿದ್ದಾನೆ. ನಂತರ ಎಸ್.ಎನ್.ಪುರಂನಲ್ಲಿ ವಾಸಿಸುತ್ತಿದ್ದ ತನ್ನ ಚಿಕ್ಕಪ್ಪನ ನಿವಾಸಕ್ಕೆ ತೆರಳಿರುವ ಆತ, ತನ್ನ ಚಿಕ್ಕಪ್ಪ ಲತೀಫ್ ಹಾಗೂ ಚಿಕ್ಕಮ್ಮ ಶಹೀದಾರನ್ನು ಕೊಚ್ಚಿ ಕೊಂದಿದ್ದಾನೆ. ಕೊನೆಗೆ ಪೆರುಮಳದಲ್ಲಿರುವ ತನ್ನ ನಿವಾಸಕ್ಕೆ ಮರಳಿರುವ ಆತ, 9ನೇ ತರಗತಿ ವಿದ್ಯಾರ್ಥಿಯಾದ ತನ್ನ ಕಿರಿಯ ಸಹೋದರ ಅಫ್ಸಾನ್ (14), ತಾಯಿ ಶೆಮಿ ಹಾಗೂ ಗೆಳತಿ ಫರ್ಸಾನಾ ಮೇಲೆ ದಾಳಿ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಈ ಆರು ಮಂದಿಯ ಪೈಕಿ, ಐದು ಮಂದಿ ಮೃತಪಟ್ಟಿದ್ದು, ಆತ ಈ ಅಪರಾಧ ಕೃತ್ಯವನ್ನು ಕೇವಲ ಎರಡು ಗಂಟೆಗಳೊಳಗೆ ನಡೆಸಿದ್ದಾನೆ ಎಂದು ವರದಿಯಾಗಿದೆ. ತನ್ನ ಗೆಳತಿಯನ್ನು ಎಷ್ಟು ಭೀಕರವಾಗಿ ಕೊಂದಿದ್ದಾನೆ ಎಂದರೆ ಆಕೆಯ ಮುಖ ಗುರುತು ಸಿಗಲಾರದಷ್ಟು ಚಚ್ಚಿ ಚಚ್ಚಿ ಕೊಲೆ ಮಾಡಿದ್ದಾನೆ.

ಐವರನ್ನು ಸಾಮೂಹಿಕವಾಗಿ ಹತ್ಯಾಕಾಂಡ ನಡೆಸಿದ ಬಳಿಕ ಹಂತಕ ಅಫಾನ್ ವೆಂಜರಮೂಡು ಪೊಲೀಸ್ ಠಾಣೆಗೆ ತೆರಳಿ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಸ್ಥಳ ಪರಿಶೀಲನೆ ಬಳಿಕ ಐವರು ಶವವಾಗಿ ಸಿಕ್ಕಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಪಿ ಶರಣಾಗುವ ಮೊದಲು ವಿಷ ಸೇವಿಸಿರುವುದಾಗಿ ಹೇಳಿಕೊಂಡಿದ್ದ, ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಂದೆಯ ಸಾಲ ತೀರಿಸಲು ಈ ಕೊಲೆ ಮಾಡಲಾಗಿದೆ ಎಂದು ಆರೋಪಿ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ. ಅವನಿಗೆ ತನ್ನ ತಂದೆಯ ಸಾಲವನ್ನು ತೀರಿಸಲು ಯಾವುದೇ ಮಾರ್ಗ ಕಾಣಲಿಲ್ಲ. ನಾನು ನನ್ನ ಸಂಬಂಧಿಕರನ್ನು ಸಂಪರ್ಕಿಸಿದಾಗ, ಅವರು ಸಹ ಸಹಾಯ ಮಾಡಲಿಲ್ಲ. ಸೇಡು ತೀರಿಸಿಕೊಳ್ಳುವುದೇ ಕೊಲೆಗೆ ಕಾರಣ ಎಂದು ಅಫಾನ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.