LATEST NEWS
ಮಂಗಳೂರಿನಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ವಾಸ್ತವ್ಯ
ಮಂಗಳೂರಿನಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ವಾಸ್ತವ್ಯ
ಮಂಗಳೂರು ಅಕ್ಟೋಬರ್ 4: ಕೇರಳದಲ್ಲಿ ನಡೆಯುತ್ತಿರುವ ಜನರಕ್ಷಾ ಯಾತ್ರೆಯಲ್ಲಿ ಭಾಗವಹಿಸಲು ಆಗಮಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇಂದು ಮಂಗಳೂರಿನಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.
ಕೇರಳದಲ್ಲಿ ನಡೆಯುತ್ತಿರುವ ಆರ್ ಎಸ್ಎಸ್ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ನಿರಂತರ ಹತ್ಯೆಯನ್ನು ಖಂಡಿಸಿ ಬಿಜೆಪಿ ಆಯೋಜಿಸಿರುವ ಬೃಹತ್ ಜನರಕ್ಷಾ ಯಾತ್ರೆಯ ನೇತೃತ್ವವನ್ನು ಇಂದು ಯೋಗಿ ಆದಿತ್ಯನಾಥ ವಹಿಸಲಿದ್ದಾರೆ. ಸುಮಾರು 10 ಕಿಲೋ ಮೀಟರ್ ಉದ್ದದ ಪಾದಯಾತ್ರೆ ನಡೆಸಲಿರುವ ಯೋಗಿ ಆದಿತ್ಯನಾಥ ಇಂದು ಮಂಗಳೂರಿಗೆ ಮರಳಲಿದ್ದಾರೆ.
ಕೇರಳದಿಂದ ಹಿಂದಿರುಗುವ ಯೋಗಿ ಆದಿತ್ಯನಾಥ ಮಂಗಳೂರಿನ ಕದ್ರಿಯಲ್ಲಿರುವ ನಾಥ ಸಂಪ್ರದಾಯದ ಕದ್ರಿ ಯೋಗೇಶ್ವರ ಮಠದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈ ಹಿನ್ನಲೆಯಲ್ಲಿ ಯೋಗೇಶ್ವರ ಮಠದಲ್ಲಿ ಚಟುವಟಿಕೆ ಚುರುಕುಗೊಂಡಿದೆ. ಮಠದ ಆವರಣದಲ್ಲಿ ಸ್ವಚ್ಚತಾ ಕಾರ್ಯ ನಡೆಯುತ್ತಿದ್ದು ಪೊಲೀಸ್ ಭದ್ರತೆಗೆ ವ್ಯವಸ್ಥೆ ಮಾಡಲಾಗಿದೆ.
ಇಂದು ಮುಂಜಾನೆಯಿಂದಲೇ ಮಠದ ಆವರಣಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂದು ರಾತ್ರಿ ಮಂಗಳೂರಿಗೆ ಆಗಮಿಸಿ ಯೋಗೇಶ್ವರ ಮಠದಲ್ಲಿ ವಾಸ್ತವ್ಯ ಹೂಡಲಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ ಅಲ್ಲಿಯೇ ಭೋಜನ ಸ್ವೀಕರಿಸಲಿದ್ದಾರೆ.
ನಾಥ ಸಂಪ್ರದಾಯದ ಯೋಗಿಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೇರಿರುವುದು ಇದೇ ಮೊದಲು. ಈ ಹಿಂದೆ ಎರಡು ಬಾರಿ ಯೋಗಿ ಆದಿತ್ಯನಾಥ ಈ ಮಠಕ್ಕೆ ಭೇಟಿ ನೀಡಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಯೋಗಿ ಆದಿತ್ಯನಾಥ ಕದ್ರಿಯ ಯೋಗೇಶ್ವರ ಮಠಕ್ಕೆ ಭೇಟಿ ನೀಡುತ್ತಿದ್ದಾರೆ.
You must be logged in to post a comment Login