ರುದ್ರ ಭೂಮಿಯಲ್ಲಿ ಕಾಮಕೇಳಿ, ಸೋಮೇಶ್ವರ ಬೀಚಲ್ಲಿ ಮುಂದುವರಿದಿದೆ ಹಳೇ ಚಾಳಿ
ಮಂಗಳೂರು,ಅಕ್ಟೋಬರ್ 20: ಸೋಮನಾಥನ ಕ್ಷೇತ್ರ ಉಳ್ಳಾಲದ ಸೋಮೇಶ್ವರ ಕಡಲ ಕಿನಾರೆಯಲ್ಲಿರುವ ಹಿಂದೂ ರುದ್ರ ಭೂಮಿಯಲ್ಲಿ ಕಾಮಕೇಳಿಯಲ್ಲಿ ತೊಡಗಿದ್ದರೆನ್ನಲಾದ ಮೂವರು ಅಪ್ರಾಪ್ತರನ್ನು ಉಳ್ಳಾಲ ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶುಕ್ರವಾರ ಮಧ್ಯಾಹ್ನದ ಸುಮಾರಿಗೆ ಇಬ್ಬರು ಅಪ್ರಾಪ್ತ ಬಾಲಕರು ಹಾಗೂ ಒರ್ವ ಅಪ್ರಾಪ್ತ ಬಾಲಕಿ ಸೋಮೇಶ್ವರದ ಹಿಂದೂ ರುದ್ರಭೂಮಿಯಲ್ಲಿ ಸಾರ್ವಜನಿಕವಾಗಿ ಅಸಹ್ಯವಾಗಿ ವರ್ತಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಇವರ ಬಗ್ಗೆ ಸ್ಥಳೀಯರು ಉಳ್ಳಾಲ ಪೋಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೋಲೀಸರು ಮೂವರನ್ನೂ ವಶಕ್ಕೆ ಪಡೆದು ಬಳಿಕ ಎಚ್ಚರಿಕೆ ನೀಡಿ ಬಿಟ್ಟಿದ್ದಾರೆ. ನಾಲ್ವರು ಅಪ್ರಾಪ್ತ ಬಾಲಕರು ಹಾಗೂ ಒರ್ಬ ಅಪ್ರಾಪ್ತ ಬಾಲಕಿ ಈ ತಂಡದಲ್ಲಿದ್ದು, ಪೋಲೀಸರು ಬರುತ್ತಿರುವುದನ್ನು ಕಂಡು ತಂಡದಲ್ಲಿದ್ದ ಇಬ್ಬರು ಬಾಲಕರು ಓಡಿ ತಪ್ಪಿಸಿಕೊಂಡಿದ್ದಾರೆ. ಪೋಲೀಸ್ ವಿಚಾರಣೆಯ ವೇಳೆಗೆ ಇವರೆಲ್ಲಾ ಒಂದೇ ಕುಟುಂಬದ ಸದಸ್ಯರು ಎನ್ನುವ ಹೇಳಿಕೆಯನ್ನು ನೀಡಿದ್ದರು.
ಕಡಲ ಕಿನಾರೆಯಲ್ಲಿ ಇಂಥಹ ಘಟನೆಗಳು ಹೆಚ್ಚಾಗಿ ನಡೆಯುತ್ತಿದ್ದು, ಇದನ್ನೇ ಕಾದು ಕುಳಿತು ನೋಡುವ ಕೆಲವು ವಿಘ್ನ ಸಂತೋಷಿಗಳೂ ಇಲ್ಲಿದ್ದಾರೆ.ಪ್ರೇಮ ಸಲ್ಲಾಪದಲ್ಲೋ, ಕಾಮ ಸಲ್ಲಾಪದಲ್ಲೋ ಕಡಲ ಕಿನಾರೆಗೆ ಬರುವ ಇಂಥಹ ಜೋಡಿಗಳನ್ನು ಹೆದರಿಸಿ ಹಣ ವಸೂಲಿ ಮಾಡುವ, ಜೋಡಿಗಳ ಫೋಟೋ ತೆಗೆದು ಪೀಡಿಸುವ ಕೆಲಸವೂ ನಿರಂತರವಾಗಿ ನಡೆಯುತ್ತಿದೆ. ಅಕ್ರಮ ಚಟುವಟಿಕೆಗಳು ನಡೆಯುವ ಸೂಚನೆ ದೊರೆತಾಗಲೇ ಪೋಲೀಸರಿಗೆ ತಿಳಿಸುವ ಬದಲು ಈ ವಿಘ್ನ ಸಂತೋಷಿಗಳು ತಾವೇ ಅವರನ್ನು ವಿಚಾರಿಸಲು ಹೋಗುತ್ತಿರುವುದು ಸಾಮಾನ್ಯವಾಗಿದೆ. ಈ ಕಾರಣದಿಂದಾಗಿ ಸೋಮೇಶ್ವರ ಕಡಲ ಕಿನಾರೆಗೆ ಸಭ್ಯ ನಾಗರಿಕರು ಹೆದರಿಕೆಯಿಂದಲೇ ಬರಬೇಕಾದ ಪರಿಸ್ಥಿತಿಯೂ ನಿರ್ಮಾಣಗೊಂಡಿದೆ.