LATEST NEWS
ಉಳ್ಳಾಲ – ಮಳೆ ಅಬ್ಬರಕ್ಕೆ ಮತ್ತೆ ಪ್ರಾರಂಭವಾದ ಕಡಲ್ಕೊರೆತ

ಮಂಗಳೂರು ಸೆಪ್ಟೆಂಬರ್ 30: ಮಳೆಯ ಅಬ್ಬರದ ನಡುವೆ ಇದೀಗ ಉಳ್ಳಾಲದಲ್ಲಿ ಕಡಲ್ಕೊರೆತದ ಪ್ರಾರಂಭವಾಗಿದೆ. ಮಂಗಳೂರು ಹೊರವಲಯದ ಉಳ್ಳಾಲ ಉಚ್ಚಿಲ-ಬಟ್ಟಪ್ಪಾಡಿಯಲ್ಲಿ ಕಳೆದ ಒಂದು ವಾರದಿಂದೀಚೆಗೆ ಮತ್ತೆ ಭಾರೀ ಕಡಲ್ಕೊರೆತ ಉಂಟಾಗಿದೆ.
ಕಡಲ್ಕೊರತದಿಂದಾಗಿ ಈ ಭಾಗದ ಕೆಲವು ಮನೆಗಳು ಅಪಾಯದ ಅಂಚಿನಲ್ಲಿವೆ. ಕಳೆದ ನಾಲ್ಕೈದು ವರ್ಷಗಳಿಂದ ಈ ಭಾಗದ ಜನ ಕಡಲ್ಕೊರೆತದ ಸಮಸ್ಯೆ ಎದುರಿಸುತ್ತಿರುವ ,ಕಡಲ್ಕೊರೆತಕ್ಕೆ ಸಿಲುಕಿ ರಸ್ತೆ ಕೊಚ್ಚಿ ಹೋದ ಬಳಿಕ ಈ ಕುಟುಂಬಗಳಿಗೆ ರಸ್ತೆ ಸಂಪರ್ಕವೂ ಇಲ್ಲದಂತಾಗಿದೆ. ಕಡಲ್ಕೊರಡತದಿಂದಾಗಿ ಕೊರೆಯುತ್ತಿರುವ ಭೂಮಿಯನ್ನು ರಕ್ಷಿಸಲು ಕಲ್ಲು ಹಾಕುವಂತೆ ನೀಡಿದ ಮನವಿಗೂ ಸ್ಪಂದನೆ ಸಿಗದ ಹಿನ್ನಲೆಯಲ್ಲಿ ಈ ಭಾಗದ ಜನ ಸ್ವಂತ ಮನೆ ಬಿಟ್ಟು ಬೇರೆ ಆಶ್ರಯವನ್ನು ಹುಡುಕಬೇಕಾದ ಸ್ಥಿತಿಯಲ್ಲಿದೆ.

ಮನೆ ಇಂದೋ,ನಾಳೆಯೋ ಕಡಲಿಗೆ ಆಹುತಿಯಾಗುವ ಸ್ಥಿತಿಯಿದ್ದರೂ ಅಪಾಯ ಎದುರಿಸುತ್ತಿರುವ ಮನೆಗಳತ್ತ ಜಿಲ್ಲಾಡಳಿತ ಈವರೆಗೂ ಸೂಕ್ತ ಗಮನಹರಿಸಿಲ್ಲ.ರಸ್ತೆ ಸಂಪರ್ಕ ಸರಿ ಇರುವ ಕಡೆಗೆ ಮಾತ್ರ ಜನಪ್ರತಿನಿಧಿಗಳು,ಅಧಿಕಾರಿಗಳು ಬಂದು ವೀಕ್ಷಣೆ ನಡೆಸುತ್ತಿದ್ದು, ಅಗತ್ಯ ಇರುವ ಕಡೆಗಳ ಸಮಸ್ಯೆಯನ್ನೇ ತಿಳಿದಿಲ್ಲ ಎಂದು ಆರೋಪಿಸುತ್ತಿವೆ ಸ್ಥಳೀಯ ಕುಟುಂಬಗಳು.ಅಳಿವೆ ಬಾಗಿಲಲ್ಲಿ ನೈಸರ್ಗಿಕವಾಗಿ ಕಡಲು ಸೇರುತ್ತಿದ್ದ ನೀರಿನ ಹರಿವು ತಿರುಗಿಸಿದ ಪರಿಣಾಮ ಈ ಭಾಗದಲ್ಲಿ ಕಡಲ್ಕೊರೆತದ ಸಮಸ್ಯೆ ತೀವ್ರವಾಗಲು ಕಾರಣ ಎನ್ನುವ ಝ ಭಾಗದ ಜನ ಈ ಭಾಗದಲ್ಲಿ ಹೆಚ್ಚಾಗಿ ನಡೆಯುತ್ತಿದ್ದ ಮರಳು ಸಾಗಾಟವನ್ನು ವಿರೋಧಿಸಿದ್ದೇ ನಮಗೆ ಮುಳುವಾಗಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ದಯಾವತಿ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದ ಕಲ್ಲುಗಳು ಸಮುದ್ರ ಪಾಲಾಗಿದೆ. ಮನೆಯ ಸುತ್ತ ಕಲ್ಲು ಹಾಕುವಂತೆ ಮನವಿ ಮಾಡಿದರೂ ಜಿಲ್ಲಾಡಳಿತ ಗಮನ ಹರಿಸಿಲ್ಲದ ಕಾರಣ ಸಾಲ ಮಾಡಿ ಮನೆಯನ್ನು ಉಳಿಸಬೇಕಾದ ಪರಿಸ್ಥಿತಿಯಲ್ಲಿ ಬಟ್ಟಪ್ಪಾಡಿಯ ಜನರಿದ್ದಾರೆ.