LATEST NEWS
ಉಡುಪಿ: ಉಮ್ರಾ ಯಾತ್ರೆಯಲ್ಲಿದ್ದ ಕೋಟದ ಇಬ್ಬರು ಮಹಿಳೆಯರು ನಿಧನ
ಉಡುಪಿ, ಮಾರ್ಚ್13: ಕೆಲವು ದಿನಗಳ ಹಿಂದೆ ಸೌದಿ ಅರೇಬಿಯಾದಲ್ಲಿರುವ ಮಕ್ಕಾ -ಮದೀನಾಕ್ಕೆ ಉಮ್ರಾ ಯಾತ್ರೆ ತೆರಳಿದ್ದ ಉಡುಪಿ ಜಿಲ್ಲೆಯ ಇಬ್ಬರು ಮಹಿಳೆಯರು ಅಲ್ಲಿ ನಿಧನರಾಗಿರುವುದು ವರದಿಯಾಗಿದೆ.
ಮೃತರನ್ನು ಬ್ರಹ್ಮಾವರ ತಾಲೂಕಿನ ಮಧುವನ ಅಚ್ಲಾಡಿ ನಿವಾಸಿ ಮರಿಯಮ್ಮ(66) ಹಾಗೂ ಖತೀಜಮ್ಮ(68) ಎಂದು ಗುರುತಿಸಲಾಗಿದೆ. ಮಂಗಳೂರಿನ ಏಜೆನ್ಸಿಯೊಂದರ ಮೂಲಕ ಒಟ್ಟು 34 ಮಂದಿಯ ತಂಡ ಮಾ.1ರಂದು ಮಂಗಳೂರಿನಿಂದ ಉಮ್ರಾ ಯಾತ್ರೆ ತೆರಳಿತ್ತು. ಇದರಲ್ಲಿ ಮೃತರು ಸೇರಿದಂತೆ ಬ್ರಹ್ಮಾವರ ತಾಲೂಕಿನ ಕೋಟ ಮಧುವನ ಅಚ್ಲಾಡಿಯ ನಾಲ್ವರು ಮಹಿಳೆಯರಿದ್ದರು.
ಇವರೆಲ್ಲ ಉಮ್ರಾ ಮುಗಿಸಿ ಮದೀನಾಕ್ಕೆ ತೆರಳುವ ತಯಾರಿಯಲ್ಲಿದ್ದು, ಈ ವೇಳೆ ಮರಿಯಮ್ಮ ಮಾ.9ರಂದು ಭಾರತೀಯ ಕಾಲಮಾನ ಮುಂಜಾನೆ 5 ಗಂಟೆಗೆ ಹೃದಯಾಘಾತದಿಂದ ಮೃತಪಟ್ಟರೆಂದು ತಿಳಿದುಬಂದಿದೆ. ಎರಡು ದಿನದ ನಂತರ ಅಂದರೆ ಮಾ.11ರಂದು ಭಾರತದ ಕಾಲಮಾನ ಅಪರಾಹ್ನ 3 ಗಂಟೆಗೆ ಖತೀಜಮ್ಮ ಅನಾರೋಗ್ಯದಿಂದ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.
ಇವರಿಬ್ಬರು ಸಂಬಂಧಿಗಳಾಗಿದ್ದು, ಇವರ ಅಂತ್ಯಕ್ರಿಯೆಯನ್ನು ಮಕ್ಕಾದಲ್ಲಿ ನೆರವೇರಿಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
You must be logged in to post a comment Login