LATEST NEWS
ಉಡುಪಿ: ಬಟ್ಟೆಯನ್ನು ಸಾಲಾಗಿ ಉರಿಸಿ ಹರಕೆ ಸಲ್ಲಿಸುವ ವಿಶಿಷ್ಟವಾದ ಹಚ್ಚಡ ಸೇವೆ
ಉಡುಪಿ: ಬಟ್ಟೆಯನ್ನು ಸಾಲಾಗಿ ಉರಿಸಿ ಹರಕೆ ಸಲ್ಲಿಸುವ ವಿಶಿಷ್ಟವಾದ ಹಚ್ಚಡ ಸೇವೆ
ಉಡುಪಿ : ವಿವಿಧ ರೀತಿಯ ಹರಕೆಗಳನ್ನು ದೇವರಿಗೆ ಅರ್ಪಿಸುವುದು ವಾಡಿಕೆ. ಆದರೆ ಉಡುಪಿಯಲ್ಲಿ ನಡೆಯುವ ರಾತ್ರಿ ರಥೋತ್ಸವದ ಸಂದರ್ಭ ದೇವರನ್ನು ಕಾಣುವುದಕ್ಕೋಸ್ಕರವಾಗಿ ಬಟ್ಟೆಗೆ ಬೆಂಕಿ ಹಚ್ಚಿ ದೇವರ ದರ್ಶನ ಮಾಡುವ ವಿಶಿಷ್ಟ ಸೇವೆ ನಡೆಸಲಾಗುತ್ತಿದೆ. ಎಂಟು ಶತಮಾನಗಳ ಇತಿಹಾಸ ಈ ಸೇವೆಗೆ ಇದೆ.
ಉಡುಪಿಯಿಂದ ಸ್ವಲ್ಪ ದೂರದಲ್ಲಿರುವ ಹೆರ್ಗ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಈ ಸೇವೆಯನ್ನು ನಡೆಸಲಾಗುತ್ತಿದೆ. ಸುಮಾರು ಎಂಟು ಶತಮಾನಗಳ ಹಿಂದೆ ಪ್ರಕೃತಿ ಮತ್ತು ದೇವಿ ಎರಡು ಅಂಶಗಳ ಸಂಸರ್ಗದಿಂದ ಲಿಂಗ ರೂಪದ ಅಪರೂಪದ ಕ್ಷೇತ್ರ ಇದಾಗಿದ್ದು. ಇಲ್ಲಿ ವರ್ಷಂಪ್ರತಿ ನಡೆಯುವ ಜಾತ್ರೋತ್ಸವದ ಸಂದರ್ಭ ನಡೆಯುವ ವಿಶಿಷ್ಟ ಹಚ್ಚಡ ಸೇವೆಗೆ ದೂರದ ಊರಿಗಳಿಂದ ಜನ ಹರಿದು ಬರುತ್ತಾರೆ. ತಮ್ಮೆಲ್ಲ ಮನದ ಕಾಮನೆಗಳ ಈಡೇರಿಕೆಯಾಗಲು ಈ ಹಚ್ಚಡ ಸೇವೆ ಸಲ್ಲಿಸುತ್ತಾರೆ.
ಹಿಂದಿನ ಕಾಲದಲ್ಲಿ ಬೆಳಕಿನ ವ್ಯವಸ್ಥೆ ಕಡಿಮೆ ಇದ್ದ ಸಂದರ್ಭದಲ್ಲಿ ರಾತ್ರಿ ರಥೋತ್ಸವದಲ್ಲಿರುವ ದೇವರನ್ನು ಕಾಣುವುದಕ್ಕಾಗಿ ಭಕ್ತರು ಎಣ್ಣೆಯಲ್ಲಿ ಅದ್ದಿದ ಬಟ್ಟೆಯನ್ನು ಉರಿಸಿ ದೇವರನ್ನು ಕಾಣುತ್ತಿದ್ದರು.ಇದೇ ಮುಂದೆ ಸೇವೆಯಾಗಿ ಮಾರ್ಪಟ್ಟು ಶತ ಮಾನಗಳಿಂದ ಈ ಸೇವೆ ನಡೆಯುತ್ತಾ ಬಂದಿದೆ.
ವರ್ಷಾವಧಿ ಉತ್ಸವದ ಸಂದರ್ಭ ರಾತ್ರಿ ರಥೋತ್ಸವ ನಡೆಯುತ್ತದೆ. ಭಕ್ತರು ತೇರನೆಳೆದು ದೇವಳದ ಮುಂಭಾಗಕ್ಕೆ ಆಗಮಿಸಿದಾಗ ತೇರಿನ ಮುಂದೆ ಎರಡೂ ಕಡೆಗಳಲ್ಲಿ ಉದ್ದದ ಕೋಲಿಗೆ ಬಟ್ಟೆ ಸಿಕ್ಕಿಸಿ ಸಾಲಾಗಿ ಬೆಂಕಿ ಹಚ್ಚುತ್ತಾರೆ ರಥೋತ್ಸವಕ್ಕೂ ಮುನ್ನ ಹಚ್ಚಡ ಸೇವೆ ಸಲ್ಲಿಸುವವರು ತಮ್ಮ ಹೆಸರು ನೋಂದಾಯಿಸುತ್ತಾರೆ. ಬಳಿಕ ದೇವಳದ ವತಿಯಿಂದ ಹಚ್ಚಡ ಸೇವೆಗೆ ಬೇಕಾದ ಬಟ್ಟೆ ಸಿದ್ಧ ಪಡಿಸುತ್ತಾರೆ.
ಸಾಲಾಗಿ ಯುವಕರು ಉರಿಯುತ್ತಿರುವ ಬಟ್ಟೆಯನ್ನು ಕೋಲಿನ ಮೂಲಕ ಎತ್ತಿ ಹಿಡಿಯುತ್ತಾರೆ. ದಗದಗನೆ ಉರಿಯುವ ಬೆಂಕಿಯ ಬೆಳಕಿನಲ್ಲಿ ದೇವರು ರಥದಲ್ಲಿ ಆಸೀನರಾಗಿ ದರ್ಶನ ನೀಡುತ್ತಾರೆ. ಈ ಸೇವೆ ಸಲ್ಲಿಸುವುದರಿಂದ ಕೆಟ್ಟ ದೃಷ್ಠಿ ಉರಿದು ನಾಶವಾಗುತ್ತದೆ. ಸಂಕಷ್ಟಗಳು ನಾಶವಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.
You must be logged in to post a comment Login