UDUPI
ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದ ಕುಟುಂಬದ ಮನವೊಲಿಸಿದ ಉಡುಪಿ ಜಿಲ್ಲಾಧಿಕಾರಿ
ಉಡುಪಿ ನವೆಂಬರ್ 21: ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದ ಒಂದೇ ಕುಟುಂಬದ ಏಳು ಮಂದಿಯನ್ನು ಸ್ವತಃ ಉಡುಪಿ ಜಿಲ್ಲಾಧಿಕಾರಿಯವರೇ ಆಗಮಿಸಿ ಮನವೊಲಿಸಿದ್ದಾರೆ.
ಉಡುಪಿ ಬ್ರಹ್ಮಾವರ ತಾಲೂಕಿನ ಸಾಯಿಬ್ರಕಟ್ಟೆಯ ಕಾಜ್ರಲ್ಲಿ ಕಾಲನಿಯಲ್ಲಿ ವಾಸವಾಗಿರುವ ಒಂದೇ ಕುಟುಂಬದ ಏಳು ಸದಸ್ಯರು ಅಪನಂಬಿಕೆಯಿಂದಾಗಿ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ್ದು, ಕೊರೊನಾ ಲಸಿಕೆಯಿಂದ ಜೀವಕ್ಕೆ ಅಪಾಯವಾಗಲಿದೆ ಎಂದು ಕುಟುಂಬದವರು ಭಯಪಟ್ಟಿದ್ದರು. ಕೊರೊನಾ ಆರಂಭದಲ್ಲಿ ಕುಟುಂಬದ ಸದಸ್ಯನೋರ್ವ ಸಾವನ್ನಪ್ಪಿದಾಗ ಆಡಳಿತ ವ್ಯವಸ್ಥೆ ಹಾಗೂ ಊರಿನವರು ತಿರಸ್ಕಾರದ ಮನೋಭಾವವನ್ನು ತೋರಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಆದ್ದರಿಂದ, ಆಶಾ ಕಾರ್ಯಕರ್ತೆಯರು, ವೈದ್ಯರು, ಸ್ಥಳೀಯ ಜನಪ್ರತಿನಿಧಿಗಳು ಎಷ್ಟು ಪ್ರಯತ್ನ ಮಾಡಿದರೂ ಲಸಿಕೆ ಹಾಕಿಸಿಕೊಳ್ಳಲು ಒಪ್ಪಿಗೆ ನೀಡಿರಲಿಲ್ಲ. ಈ ಹಿನ್ನೆಲೆ ಶನಿವಾರ ಸಾಯಿಬ್ರಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಡಿಸಿ ಈ ಕುಟುಂಬದ ಬಗ್ಗೆ ಮಾಹಿತಿ ತಿಳಿದು ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಮನೆಯವರ ಸಮಸ್ಯೆ ಹಾಗೂ ನೋವುಗಳನ್ನು ಆಲಿಸಿದ ಜಿಲ್ಲಾಧಿಕಾರಿ, ನಿಮಗೆ ಯಾವುದೇ ಸಮಸ್ಯೆಯಾದಲ್ಲಿ ಜಿಲ್ಲಾಡಳಿತ ರಕ್ಷಣೆ ನೀಡಲಿದೆ. ಸಮಸ್ಯೆಗಳನ್ನು ಹಂತ-ಹಂತವಾಗಿ ಪರಿಹರಿಸಲಾಗುವುದು. ದಯವಿಟ್ಟು ಲಸಿಕೆ ಪಡೆಯಿರಿ ಎಂದು ಮನವಿ ಮಾಡಿದ್ದಾರೆ. ಬಳಿಕ ಕುಟುಂಬ ಸದಸ್ಯರು ಒಬ್ಬೊಬ್ಬರಾಗಿ ಲಸಿಕೆ ಪಡೆಯುವುದಾಗಿ ಭರವಸೆ ನೀಡಿದ್ದಾರೆ.
You must be logged in to post a comment Login