KARNATAKA
ಕಾಂಗ್ರೆಸ್ ನಿಂದ ಮೇಕೆದಾಟು ಪಾದಯಾತ್ರೆಗೆ ಅದ್ದೂರಿ ಚಾಲನೆ
ಬೆಂಗಳೂರು, ಜನವರಿ 09: ಮೇಕೆದಾಟು ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸಿ ಆರಂಭವಾದ ಪಾದಯಾತ್ರೆಗೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆಯಲ್ಲಿದ್ದರು. ಆದಿಚುಂಚನಗಿರಿ ಕ್ಷೇತ್ರದ ರಾಮನಗರ ಶಾಖಾಮಠದ ಶ್ರೀ ಅನ್ನದಾನೇಶ್ವೆರ ಸ್ವಾಮೀಜಿ, ಕನಕಪುರ ಮರಳಗವಿ ಮಠದ ಶಿವರುದ್ರ ಸ್ವಾಮಜೀ, ದೇಗುಲಮಠದ ಶ್ರೀನಿರ್ವಾಣ ಸ್ವಾಮಿಜಿ, ಹಾರುಬಲೆ ಚರ್ಚ್ನ ಪಾದ್ರಿ ಸೇರಿ ಅನೇಕ ಧಾರ್ಮಿಕ ನಾಯಕರ ಸಾನಿಧ್ಯದಲ್ಲಿ ನಗಾರಿ ಬಾರಿಸಿ, ಗಿಡಗಳಿಗೆ ನೀರು ಎರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಸದ ಡಿ.ಕೆ.ಸುರೇಶ್ ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ಮಾತುಗಳನ್ನಾಡಿ, 30 ವರ್ಷಗಳಿಂದಲೂ ಮೇಕೆದಾಟು ಯೋಜನೆ ಬೇಡಿಕೆ ಕೇಳಿ ಬಂದಿದೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಯೋಜನೆ ರೂಪರೇಷೆ ರಚನೆಯಾಯಿತು. ಕೇಂದ್ರದಿಂದ ವಾಪಸ್ ಬಂದಿದ್ದ ಯೋಜನೆ ಪ್ರಸ್ತಾವನೆಯನ್ನು ಡಿ.ಕೆ.ಶಿವಕುಮಾರ್ ಸಚಿವರಾಗಿದ್ದಾಗ ಮತ್ತೆ ಕೇಂದ್ರಕ್ಕೆ ಕಳುಹಿಸಿ ಅನುಮತಿ ಪಡೆಯಲಾಯಿತು.
ಯೋಜನೆಯಿಂದ ಹಾನಿಗೊಳಗಾಗುವ ಅರಣ್ಯ ಪ್ರದೇಶಕ್ಕೆ ಪರ್ಯಾಯವಾಗಿ ಮಂಡ್ಯ, ರಾಮನಗರ, ಚಾಮರಾಜನಗರ ಜಿಲ್ಲೆ 10 ಸಾವಿರ ಎಕರೆಯನ್ನು ಗುರುತಿಸಲಾಗಿದೆ ಎಂದು ಕೇಂದ್ರ ಅರಣ್ಯ ಇಲಾಖೆಗೆ ತಿಳಿಸಲಾಗಿದೆ. ಆದರೂ ಈವರೆಗೂ ಯೋಜನೆ ಆರಂಭವಾಗಿಲ್ಲ. ಯೋಜನೆ ಶುರುವಾಗಬೇಕು ಎಂದು ಆಗ್ರಹಿಸಲು ಸಂಗಮದಿಂದ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದವರೆಗೂ 156 ಕಿಲೋ ಮೀಟರ್ ಪಾದಯಾತ್ರೆ ಆರಂಭವಾಗಿದೆ ಎಂದು ಹೇಳಿದರು.
ಚಿತ್ರರಂಗದ ಉಮಾಶ್ರೀ, ದುನಿಯಾ ವಿಜಯ, ಸಾಧುಕೋಕಿಲ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹಮದ್, ರಾಮಲಿಂಗಾರೆಡ್ಡಿ, ಧೃವನಾರಾಯಣ, ಶಾಸಕರಾದ ಎಂ.ಬಿ.ಪಾಟೀಲ, ಡಾ.ಜಿ.ಪರಮೇಶ್ವರ್, ಆರ್.ವಿ.ದೇಶಪಾಂಡೆ ಸೇರಿ ಅನೇಕರು ಭಾಗವಹಿಸಿದ್ದರು.
You must be logged in to post a comment Login