ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಟೀಂ ಇಂಡಿಯಾ ಆಯ್ದ ಆಟಗಾರರಿಗೆ ಮಹೀಂದ್ರಾ & ಮಹೀಂದ್ರಾ ಕಂಪನಿ ಅಧ್ಯಕ್ಷ ಆನಂದ್ ಮಹೀಂದ್ರಾ ಎಸ್ಯುವಿ ಕಾರುಗಳನ್ನ ಉಡುಗೊರೆಯಾಗಿ ನೀಡೋದಾಗಿ ಟ್ವಿಟರ್ನಲ್ಲಿ ಮಾಹಿತಿ ನೀಡಿದ್ದಾರೆ.
ಟೆಸ್ಟ್ ಸೀರಿಸ್ಗೆ ಮೊದಲ ಬಾರಿ ಪಾದರ್ಪಣೆ ಮಾಡಿದ ಮೊಹಮ್ಮದ್ ಸಿರಾಜ್, ಶುಭಮನ್ ಗಿಲ್, ವಾಷಿಂಗ್ಟನ್ ಸುಂದರ್, ಟಿ. ನಟರಾಜನ್, ನವದೀಪ್ ಸೈನಿ ಹಾಗೂ ಶಾರ್ದೂಲ್ ಠಾಕೂರ್ಗೆ ಈ ವಿಶೇಷ ಉಡುಗೊರೆ ಸಿಗಲಿದೆ.
ಅಂದ ಹಾಗೆ ಆನಂದ್ ಮಹೀಂದ್ರಾ ಈ ಉಡುಗೊರೆಯನ್ನ ಕಂಪನಿ ಹಣದಿಂದ ನೀಡುತ್ತಿಲ್ಲ. ಬದಲಾಗಿ ತಮ್ಮ ಸ್ವಂತ ಹಣದಿಂದ ಈ ಉಡುಗೊರೆಗಳನ್ನ ಆಟಗಾರರಿಗೆ ನೀಡುತ್ತಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯನ್ನ 2-1 ಅಂತರದಲ್ಲಿ ಗೆಲ್ಲುವ ಮೂಲಕ ಆಸ್ಟ್ರೇಲಿಯಾವನ್ನ ಬಗ್ಗು ಬಡಿದಿದೆ. ಮಾತ್ರವಲ್ಲದೇ ಕಳೆದ 32 ವರ್ಷಗಳಿಂದ ಗಬ್ಬಾ ಕ್ರೀಡಾಂಗಣದಲ್ಲಿ ಕೇವಲ ಗೆಲುವಿನ ರುಚಿಯನ್ನಷ್ಟೇ ಕಾಣುತ್ತಾ ಬಂದಿದ್ದ ಆಸ್ಟ್ರೇಲಿಯಾ ತಂಡವನ್ನೇ ಸೋಲಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.



