ಮಂಗಳೂರು ಮೇ 05: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಪೊಲೀಸರು ನೇರವಾಗಿ ಭಾಗಿಯಾಗಿದ್ದಾರೆ ಎಂದು ಮೂಡಬಿದಿರೆ ಶಾಸಕ ಉಮಾನಾಥ ಕೊಟ್ಯಾನ್ ಗಂಭೀರ ಆರೋಪ ಮಾಡಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆಯುಧ ಇಟ್ಟುಕೊಳ್ಳುವುದು ತಪ್ಪು, ಆದರೆ ಸುಹಾಸ್ ಆತ್ಮರಕ್ಷಣೆಗಾಗಿ ವಾಹನದಲ್ಲಿ ಇಟ್ಟುಕೊಂಡಿದ್ದ ಆಯುಧವನ್ನು ಪೊಲೀಸರು ಒತ್ತಾಯದಿಂದ ಖಾಲಿ ಮಾಡಿಸಿದ್ದರು. ಪೊಲೀಸರ ಸಹಕಾರದಲ್ಲಿ ಈ ಕೊಲೆ ನಡೆದಿದೆ. ಆರೋಪಿಗಳೇ ಪೊಲೀಸರಿಗೆ ಶರಣಾಗಿದ್ದಾರೆ. ಬಂಧನವಾದ ಬಳಿಕ ಪೊಲೀಸರು ಆರೋಪಿಗಳ ಮೈಮುಟ್ಟಿಲ್ಲ.

ಸುಹಾಸ್ ಹತ್ಯೆ ನಡೆಯುವ ವೇಳೆ ಆರೋಪಿಗಳಿಗೆ ರಕ್ಷಣೆ ಕೊಡುವ ರೀತಿಯಲ್ಲಿ 25 ಜನರು ಸುತ್ತ ಕೋಟೆ ನಿರ್ಮಿಸಿದ್ದರು. ಸ್ಥಳೀಯ ಕೆಲವರ ಸಹಕಾರದಲ್ಲಿ ಈ ಹತ್ಯೆ ನಡೆದಿದೆ. ಹತ್ಯೆಗೂ ಮುನ್ನ ಪೊಲೀಸರು ಮತ್ತು ಆರೋಪಿಗಳ ನಡುವೆ ಒಡಂಬಡಿಕೆ ನಡೆದಿರುವ ಸಾಧ್ಯತೆ ಇದೆ. ಹೀಗಾಗಿ, ಪೊಲೀಸ್ ವಾಹನ ಸ್ಥಳಕ್ಕೆ ಬಂದರೂ, ಸುಹಾಸ್ ರಕ್ಷಣೆ ಮಾಡಿಲ್ಲ. ಸ್ಥಳೀಯರು ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ’ ಎಂದರು. ಬಜಪೆ, ಸುರತ್ಕಲ್‌, ಪಣಂಬೂರು ಪೊಲೀಸ್ ಠಾಣೆಯ ಕೆಲ ಪೊಲೀಸರ ಮೊಬೈಲ್ ಫೋನ್ ಕರೆಗಳನ್ನು ಪರಿಶೀಲಿಸಿದರೆ ಎಲ್ಲ ವಿಷಯ ಬಹಿರಂಗವಾಗಲಿದೆ ಎಂದು ಹೇಳಿದರು.

Share Information