BANTWAL
ಬಂಟ್ವಾಳ – ಹಾವು ಕಚ್ಚಿ ನವವಿವಾಹಿತ ಯುವಕ ಸಾವು

ಬಂಟ್ವಾಳ ಜೂನ್ 05: ವಿಷದ ಹಾವೊಂದು ಕಡಿದ ಪರಿಣಾಮ ನವ ವಿವಾಹಿತ ಯುವಕನೋರ್ವ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ತೆಂಕಕಜೆಕಾರು ಗ್ರಾಮದ ಪಾದೆಮನೆ ಎಂಬಲ್ಲಿ ಮಂಗಳವಾರ ಸಂಭವಿಸಿದೆ.
ಮೃತರನ್ನು ಅಶ್ರಫ್(28) ಎಂದು ಗುರುತಿಸಲಾಗಿದೆ. ಕೂಲಿ ಕಾರ್ಮಿಕರಾಗಿದ್ದ ಅವರು ಡವರಕಲ್ಲುನಲ್ಲಿ ಮನೆಯೊಂದರಲ್ಲಿ ಅಡಿಕೆ ಸುಲಿಯುವ ಕೆಲಸ ಮಾಡುತ್ತಿರುವಾಗ ಮಧ್ಯಾಹ್ನದ ಹೊತ್ತು ಕಾಲಿನ ಬೆರಳಿಗೆ ವಿಷದ ಹಾವು ಕಚ್ಚಿತ್ತು. ತತ್ಕ್ಷಣ ಅವರಿಗೆ ಸಮೀಪದ ನಾಟಿ ವೈದ್ಯರಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಅವರ ಸ್ಥಿತಿ ಗಂಭೀರವಾಗುತ್ತಿದ್ದಂತೆ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ದಾರಿ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ. ಅಶ್ರಫ್ ಅವರಿಗೆ ಆರು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದು, ಗರ್ಭಿಣಿ ಪತ್ನಿಯನ್ನು ಅಗಲಿದ್ದಾರೆ. ಅವರ ತಂದೆ ನಿಧನರಾಗಿದ್ದು, ಮನೆಗೆ ಅಶ್ರಫ್ ಅವರು ಆಧಾರವಾಗಿದ್ದರು.
