KARNATAKA
ಅಡ್ಡ ಹಾಕಿದ್ದ ಟ್ರಾಫಿಕ್ ಪೊಲೀಸ್ ನನ್ನೆ ಕಾರಿನ ಬ್ಯಾನೆಟ್ ಮೇಲೆ ಎಳೆದೊಯ್ದ ಚಾಲಕ

ಶಿವಮೊಗ್ಗ, ಅಕ್ಟೋಬರ್ 24: ರಸ್ತೆ ಬದಿ ಟ್ರಾಫಿಕ್ ಉಲ್ಲಂಘನೆ ಪರಿಶೀಲನೆ ವೇಳೆ ಕಾರೊಂದನ್ನು ನಿಲ್ಲಿಸುವಂತೆ ಸೂಚಿಸಿದ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನೆ ಕಾರಿನ ಬ್ಯಾನೆಟ್ ಮೇಲೆ ಕಾರಿನ ಚಾಲಕ ಎಳೆದೊಯ್ದ ಘಟನೆ ಸಹ್ಯಾದ್ರಿ ಕಾಲೇಜು ಮುಂಭಾಗದಲ್ಲಿ ನಡೆದಿದೆ.
ಶಿವಮೊಗ್ಗದ ಪೂರ್ವ ಸಂಚಾರ ವಿಭಾಗದ ಕಾನ್ಸ್ಟೆಬಲ್ ಪ್ರಭುರಾಜ್ ಸಹ್ಯಾದ್ರಿ ಕಾಲೇಜು ಬಳಿ ಕರ್ತವ್ಯ ನಿರತರಾಗಿದ್ದಾರೆ. ಈ ವೇಳೆ ಎಂಆರ್ಎಸ್ ಸರ್ಕಲ್ ಕಡೆಯಿಂದ ಹೊಳೆ ಬಸ್ ನಿಲ್ದಾಣದತ್ತ ಹೊರಟಿದ್ದ ಕಿಯಾ ಸಾನೆಟ್ ಕಾರಿನ ಚಾಲಕ ಸಂಚಾರ ನಿಯಮ ಉಲ್ಲಂಘನೆ ಮಾಡಿರುವುದು ಕಂಡು ಬಂದಿದೆ. ಆಗ ಕಾರಿಗೆ ಅಡ್ಡ ನಿಂತ ಅವರು, ಪಕ್ಕಕ್ಕೆ ನಿಲ್ಲಿಸುವಂತೆ ಚಾಲಕನಿಗೆ ಹೇಳಿದ್ದಾರೆ.

ಕಾರು ನಿಲ್ಲಿಸದೇ ಪ್ರಭುರಾಜ್ ಅವರೊಂದಿಗೆ ವಾದ ಮಾಡುತ್ತಲೇ ಮುಂದೆ ಚಲಾಯಿಸುತ್ತಾ ಅವರನ್ನು ದಬ್ಬಿಕೊಂಡು ಹೋಗಿದ್ದಾನೆ. ಹಿಂದಕ್ಕೆ ಸರಿಯುತ್ತಾ ಹೋದ ಕಾನ್ಸ್ಟೆಬಲ್, ಕಾರಿನ ವೇಗ ಹೆಚ್ಚುತ್ತಲೇ ಅದರ ಬಾನೆಟ್ ಮೇಲೆ ಬಿದ್ದಿದ್ದಾರೆ. ಆಗಲೂ ಕಾರು ನಿಲ್ಲಿಸದೇ ಮುಂದೆ ಸಾಗಿದ್ದಾನೆ. ಸ್ವಲ್ಪ ದೂರ ತೆರಳಿದ ನಂತರ ಕಾರು ನಿಲ್ಲಿಸಿದ್ದಾನೆ. ಕಾನ್ಸ್ಟೆಬಲ್ ಕೆಳಗೆ ಇಳಿದು ಪಕ್ಕಕ್ಕೆ ಬರುತ್ತಿದ್ದಂತೆಯೇ ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗಿದ್ದಾನೆ ಎಂದು ಗೊತ್ತಾಗಿದೆ.
ಘಟನೆಯ ದೃಶ್ಯವನ್ನು ಸಾರ್ವಜನಿಕರೊಬ್ಬರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ‘ಚಾಲಕ ಕಾರು ನಿಲ್ಲಿಸದೇ ಸ್ಥಳದಿಂದ ಹೊರಟು ಹೋಗಿದ್ದಾನೆ. ಅಲ್ಲಿನ ಸಿಸಿ ಟಿವಿ ಕ್ಯಾಮೆರಾದ ದೃಶ್ಯ ಪರಿಶೀಲನೆ ನಡೆಸಿದ್ದೇವೆ. ಕಾರು ಚಾಲಕ ಭದ್ರಾವತಿಯ ಹೊಸಮನೆ ಬಡಾವಣೆ ನಿವಾಸಿ, ಕೇಬಲ್ ಆಪರೇಟರ್ ಮಿಥುನ್ ಜಗದಾಳೆ ಎಂದು ಗೊತ್ತಾಗಿದೆ. ಆರೋಪಿ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಬಂಧನಕ್ಕೆ ಬಲೆ ಬೀಸಿದ್ದೇವೆ’ ಎಂದು ಎಸ್ಪಿ ಜಿ.ಕೆ.ಮಿಥುನ್ಕುಮಾರ್ ಪ್ರತಿಕ್ರಿಯಿಸಿದರು.
Shivamogga Traffic Officer Dragged by Car: In a troubling incident near Sahyadri College, #Shivamogga, a traffic officer was dragged for over 100 meters on the bonnet of a car after attempting to stop the vehicle for a routine check. #traffic #DGkarnataka #karnataka pic.twitter.com/58JYhBNDAu
— Bharathirajan (@bharathircc) October 24, 2024