LATEST NEWS
ಮಂಗಳೂರು ಡಿಸಿಪಿ ಕಾರಿನ ಮೇಲೆ ಮರಳು ಲಾರಿ ಹತ್ತಿಸಲು ಯತ್ನ: ಚಾಲಕನ ಬಂಧನ
ಮಂಗಳೂರು: ಅಕ್ರಮ ಮರಳುಗಾರಿಕೆ ತಡೆಯಲು ಹೋಗಿದ್ದ ಡಿಸಿಪಿ ಕಾರಿನ ಮೇಲೆ ಲಾರಿ ಹತ್ತಿಸಲು ಯತ್ನಿಸಿದ್ದ ಲಾರಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಅಡ್ಯಾರು ಬಳಿ ಅಕ್ರಮ ಮರಳು ಸಾಗಣೆ ನಡೆಯುತ್ತಿರುವ ಕುರಿತು ಸಾರ್ವಜನಿಕರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಮಧ್ಯರಾತ್ರಿ ವೇಳೆ ದಾಳಿ ನಡೆಸಿದ್ದ ಡಿಸಿಪಿ ಹರಿರಾಮ್ ಶಂಕರ್ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿ ಬೆನ್ನಟ್ಟಿ, ಪರಂಗಿಪೇಟೆ ಔಟ್ ಪೋಸ್ಟ್ ಬಳಿ ಲಾರಿ ಅಡ್ಡಗಟ್ಟಿದ್ದರು. ಈ ವೇಳೆ ಡಿಸಿಪಿ ಕಾರಿನ ಮೇಲೆ ಲಾರಿ ಹತ್ತಿಸಲು ಚಾಲಕ ಪ್ರಯತ್ನಿಸಿದ್ದ. ಬಳಿಕ ಔಟ್ಪೋಸ್ಟ್ನ ಬ್ಯಾರಿಕೇಡ್ಗೆ ಡಿಕ್ಕಿ ಹೊಡೆಸಿ ಪರಾರಿಯಾಗಿದ್ದ.
ಮತ್ತೆ ಮರಳು ಸಾಗಣೆ ಲಾರಿ ಹಿಂಬಾಲಿಸಿದ್ದ ಡಿಸಿಪಿ ಹರಿರಾಮ್ ಸೂಚನೆಯಂತೆ ಪೊಲೀಸರು ಬಂಟ್ವಾಳದಲ್ಲಿ ಮರಳು ಲಾರಿ ವಶಕ್ಕೆ ಪಡೆದರು. ಲಾರಿ ಚಾಲಕ ಮತ್ತು ಲಾರಿಯನ್ನು ಹಿಂಬಾಲಿಸುತ್ತಿದ್ದ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದರು.
ಆರೋಪಿಗಳ ವಿರುದ್ಧ ಮರಳು ಕಳವು, ನಿರ್ಲಕ್ಷ್ಯದ ಚಾಲನೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆ ದಾಖಲು ಮಾಡಲಾಗಿದೆ. ಮರಳುಗಳ್ಳರು ತಪ್ಪಿಸಿಕೊಂಡು ಹೋಗುವ ಸಿಸಿಟಿವಿ ದೃಶ್ಯ ಪೊಲೀಸರಿಗೆ ಸಿಕ್ಕಿದೆ.
You must be logged in to post a comment Login