LATEST NEWS
ದೀದಿ ಬೆಂಬಲಕ್ಕೆ ನಿಲ್ಲುವ ಮೂಲಕ ರಾಹುಲ್ ಗಾಂಧಿಯಿಂದ ಭ್ರಷ್ಟಾಚಾರಕ್ಕೆ ಪ್ರೋತ್ಸಾಹ – ವೇದವ್ಯಾಸ್ ಕಾಮತ್

ದೀದಿ ಬೆಂಬಲಕ್ಕೆ ನಿಲ್ಲುವ ಮೂಲಕ ರಾಹುಲ್ ಗಾಂಧಿಯಿಂದ ಭ್ರಷ್ಟಾಚಾರಕ್ಕೆ ಪ್ರೋತ್ಸಾಹ – ವೇದವ್ಯಾಸ್ ಕಾಮತ್
ಮಂಗಳೂರು ಫೆಬ್ರವರಿ 5: ಮಮತಾ ಬ್ಯಾನರ್ಜಿಯವರ ಬೆಂಬಲಕ್ಕೆ ನಿಲ್ಲುವ ಮೂಲಕ ಕಾಂಗ್ರೇಸ್ ಅಧ್ಯಕ್ಷ ರಾಹುಲ್ ಗಾಂಧಿ ಭ್ರಷ್ಟಾಚಾರವನ್ನು ಪ್ರೋತ್ಸಾಹಿಸುತ್ತಿದ್ದು, ಈ ಕುರಿತಂತೆ ದಕ್ಷಿಣಕನ್ನಡ ಜಿಲ್ಲಾ ಕಾಂಗ್ರೇಸ್ ನಾಯಕರು ಸುದ್ದಿಗೋಷ್ಠಿ ನಡೆಸಿ ಉತ್ತರಿಸಲಿ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.
ಕೇಂದ್ರ ಸರಕಾರದ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ಪಶ್ಚಿಮ ಬಂಗಾಲದ ಸಿಎಂ ಮಮತಾ ಬ್ಯಾನರ್ಜಿ ವಿರುದ್ದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಕಿಡಿಕಾರಿದ ಅವರು ತಾವು ಯಾವುದೇ ಹಗಣರದಲ್ಲಿ ಭಾಗಿಯಾಗಿಲ್ಲವೆಂದರೆ ಸಿಬಿಐ ತನಿಖೆಗೆ ಅಡ್ಡಿ ಪಡಿಸುತ್ತಿರುವುದು ಯಾಕೆ ಎಂದು ಪಶ್ಚಿಮಬಂಗಾಲದ ಮುಖ್ಯಮಂತ್ರಿಯವರನ್ನು ಪ್ರಶ್ನೆ ಮಾಡಿದ್ದಾರೆ.

ದೀದಿ ಎಂದರೆ ಅಕ್ಕ ಎಂದು ಅರ್ಥ. ಅಕ್ಕನ ಸ್ಥಾನದಲ್ಲಿ ನಿಂತು ಭ್ರಷ್ಟಾಚಾರಿಗಳನ್ನು ಶಿಕ್ಷಿಸಿ ಶಾರದಾ ಚಿಟ್ ಫಂಡಿನಲ್ಲಿ ಹಣ ಕಳೆದುಕೊಂಡ ಪಶ್ಚಿಮ ಬಂಗಾಲದ ನಾಗರಿಕರಿಗೆ ನ್ಯಾಯ ಕೊಡಿಸಬೇಕಾಗಿದ್ದ ಮಮತಾ ಬ್ಯಾನರ್ಜಿ ಭ್ರಷ್ಟರನ್ನು ರಕ್ಷಿಸುತ್ತಿರುವುದು ಮುಖ್ಯಮಂತ್ರಿಯಾಗಿರುವ ಅವರ ಸ್ಥಾನಕ್ಕೆ ತಕ್ಕುದಲ್ಲ ಎಂದರು.
ಭ್ರಷ್ಟಾಚಾರಕ್ಕೆ ತನಿಖೆ ಬಂದ ಸಿಬಿಐ ಅಧಿಕಾರಿಗಳಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವರ ಸೊತ್ತು ನಾಶ ಮಾಡಿರುವ ಟಿಎಂಸಿ ಗೂಂಡಾ ಕಾರ್ಯಕರ್ತರನ್ನು ಮಮತಾ ಬ್ಯಾನರ್ಜಿ ಬೆಂಬಲಿಸುತ್ತಿದ್ದಾರೆ. ಇದರಿಂದ ಉತ್ಸಾಹಗೊಂಡ ಅವರ ಪಕ್ಷದ ಕಾರ್ಯಕರ್ತರು ಪಶ್ಚಿಮ ಬಂಗಾಲದಲ್ಲಿರುವ ಬಿಜೆಪಿ ಕಚೇರಿಗಳನ್ನು ನಾಶ ಪಡಿಸಿದ್ದಾರೆ.
ಸುಪ್ರೀಂಕೋರ್ಟ್ ಎಚ್ಚರಿಕೆಯ ನಂತರವೂ ಸಿಎಂ ಸ್ಥಾನದಲ್ಲಿರುವ ಮಮತಾ ಉಡಾಫೆಯಿಂದ ವರ್ತಿಸುತ್ತಿರುವುದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಅರಾಜಕತೆಯ ವಾತಾವರಣ ಸೃಷ್ಟಿಸುತ್ತಿರುವುದಕ್ಕೆ ದ್ಯೋತಕ ಎಂದು ಶಾಸಕ ಕಾಮತ್ ಹೇಳಿದ್ದಾರೆ.
ಹಿಂದೆ ಯುಪಿಎ ಅಧಿಕಾರದಲ್ಲಿದ್ದಾಗ ಮಮತಾ ಬ್ಯಾನರ್ಜಿ ವಿರುದ್ಧ ಭ್ರಷ್ಟಾಚಾರದ ತನಿಖೆ ಆಗಬೇಕು ಎಂದು ಹೇಳುತ್ತಿದ್ದ ಕಾಂಗ್ರೆಸ್ ಈಗ ಯಾಕೆ ಮೌನವಾಗಿದೆ. ರಾಹುಲ್ ಗಾಂಧಿಯವರು ಮಮತಾ ಬ್ಯಾನರ್ಜಿಯವರ ಬೆಂಬಲಕ್ಕೆ ನಿಲ್ಲುವ ಮೂಲಕ ತಾವು ಕೂಡ ಭ್ರಷ್ಟಾಚಾರವನ್ನು ಪ್ರೋತ್ಸಾಹಿಸಿದಂತಾಗಿದೆ ಎಂದರು.