LATEST NEWS
ಕುಂದಾಪುರ – ಕಾಳಿಂಗ ಸರ್ಪವನ್ನೇ ನುಂಗಲು ಹೋಗಿ ಸಿಕ್ಕಿಹಾಕಿಕೊಂಡ ಹೆಬ್ಬಾವು

ಕುಂದಾಪುರ ಅಗಸ್ಟ್ 09: ಕಾಳಿಂಗ ಸರ್ಪವನ್ನೇ ನುಂಗಲು ಹೆಬ್ಬಾವೊಂದು ಯತ್ನಿಸಿದ ಘಟನೆ ಕುಂದಾಪುರ ಜಡ್ಕಲ್ ಗ್ರಾಮದ ಹಳನೀರು ಎಂಬಲ್ಲಿ ಬುಧವಾರ ಸಂಜೆ ನಡೆದಿದೆ.
ಹಳನೀರಿನ ಮುತ್ತಮ್ಮ ಶೆಡ್ತಿ ಅವರ ಗದ್ದೆಯಲ್ಲಿ ಹೆಬ್ಬಾವು ಕಾಳಿಂಗ ಸರ್ಪದ ತಲೆಯನ್ನು ನುಂಗಿತ್ತು. ಬಳಿಕ ಕಾಳಿಂಗ ಸರ್ಪದ ಉಳಿದ ಭಾಗವನ್ನು ಹೆಬ್ಬಾವಿಗೆ ನುಂಗಲಾಗದೇ ಅದನ್ನು ಸುತ್ತು ಹಾಕಲು ಪ್ರಯತ್ನಿಸುತ್ತಿತ್ತು. ಹೆಬ್ಬಾವಿನ ಬಾಲವನ್ನು ಕಾಳಿಂಗ ಸರ್ಪ ಕೂಡ ಸುತ್ತುಹಾಕಿಕೊಂಡಿತ್ತು. ಕೂಡಲೇ ಸ್ಥಳೀಯರು ಗಮನಿಸಿ ಸ್ನೇಕ್ ಶಂಕರ್ಗೆ ಮಾಹಿತಿ ನೀಡಿದ್ದಾರೆ.

ಕಾಳಿಂಗ ಸರ್ಪವನ್ನು ನುಂಗಲಾಗದೇ ಹೆಬ್ಬಾವು ತನ್ನ ಪ್ರಯತ್ನವನ್ನ ಕೈಬಿಟ್ಟ ನಂತರ ಅಂಪಾರಿನ ಸ್ನೇಕ್ ಶಂಕರ್ ಅವರು ಎರಡೂ ಹಾವುಗಳನ್ನು ಬೇರ್ಪಡಿಸಿದರು. ಬಳಿಕ ಸ್ಥಳೀಯರ ಸಹಕಾರದೊಂದಿಗೆ ಎರಡೂ ಹಾವುಗಳನ್ನು ಆನೆಝರಿ ಸಮೂಪದ ಕಾಡಿಗೆ ಕೊಂಡೊಯ್ದು ಬಿಟ್ಟಿದ್ದಾರೆ.