ಮಂಗಳೂರು ಜುಲೈ 01: ಸಹಕಾರಿ ಸಂಘದ ಬ್ಯಾಂಕ್ ನಲ್ಲಿ ಗ್ರಾಹಕರು ಇಟ್ಟಿದ್ದ ಚಿನ್ನವನ್ನು ಸಂಘದ ಸಿಬ್ಬಂದಿಯೊಬ್ಬ ಬೇರೆ ಸೊಸೈಟಿಯಲ್ಲಿ ಅಡವಿಟ್ಟು ಲೋನ್ ಪಡೆದು ವಂಚನೆ ಮಾಡಿದ ಪ್ರಕರಣ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಮಂಗಳೂರಿನ ಶಕ್ತಿನಗರದಲ್ಲಿ ಪದುವಾ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಈ ವಂಚನೆ ನಡೆದಿದೆ. ಗ್ರಾಹಕರು ತಮ್ಮ ಕಷ್ಟಕ್ಕೆ ಬ್ಯಾಂಕ್ ನಲ್ಲಿ ಅಡವಿಟ್ಟಿದ್ದ ಚಿನ್ನವನ್ನು ಸೊಸೈಟಿ ಮ್ಯಾನೇಜರ್ ಪ್ರೀತೇಶ್ ಎಂಬಾತ ಎಗರಿಸಿದ್ದಾನೆ. ಬ್ಯಾಂಕ್ ಮ್ಯಾನೇಜರ್ ಪ್ರೀತೇಶ್ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಸಹಕಾರಿ ಸಂಘದ ಲಾಕರ್ನಿಂದ ಚಿನ್ನಾಭರಣವನ್ನು ಎಗರಿಸಿ ತನ್ನ ಆಪ್ತರ ಮೂಲಕ ಶಕ್ತಿನಗರದಲ್ಲೇ ಇರುವ ಇನ್ನೊಂದು ಸಹಕಾರಿ ಸಂಘದಲ್ಲಿ ಅಡವಿಟ್ಟು 3.25 ಕೋಟಿ ರೂ. ಸಾಲ ಪಡೆದಿದ್ದಾನೆ.
ಈ ಮಾಹಿತಿ ಬ್ಯಾಂಕ್ ಗೆ ತಿಳಿಯುತ್ತಿದ್ದಂತೆ ಆರೋಪಿ ವಿದೇಶಕ್ಕೆ ಪರಾರಿಯಾಗಿದ್ದಾನೆ. ಇದರ ಬೆನ್ನಲ್ಲೇ ಗ್ರಾಹಕರು ಸಹಕಾರಿ ಸಂಘಕ್ಕೆ ಬಂದು ತರಾಟೆಗೆ ತೆಗೆದುಕೊಳ್ಳಲು ಆರಂಭಿಸಿದರು. ಜೂನ್ 17ರಂದು ಪ್ರಕರಣ ದಾಖಲಾಗಿದ್ದು, ಆರೋಪಿ ವಿರುದ್ಧ ಲುಕ್ಔಟ್ ನೋಟಿಸ್ ಹೊರಡಿಸಿದ್ದರು. ಆರೋಪಿ ಪ್ರೀತಮ್ನನ್ನು ಇತ್ತೀಚೆಗೆ ಶಕ್ತಿನಗರ ಬ್ರ್ಯಾಂಚ್ನಿಂದ ಯೆಯ್ಯಾಡಿ ಬ್ರ್ಯಾಂಚ್ಗೆ ವರ್ಗಾವಣೆ ಮಾಡಲಾಗಿತ್ತು. ಈ ಸಂದರ್ಭ ಬ್ಯಾಂಕ್ನ ಚಿನ್ನಾಭರಣ ಹಾಗೂ ಇತರ ಸೊತ್ತುಗಳನ್ನು ಹೊಸ ಮ್ಯಾನೇಜರ್ ಮುಂದೆ ಹಾಜರುಪಡಿಸಬೇಕಾದ ಕಾರಣ ಸಂದಿಗ್ಧ ಸ್ಥಿತಿಗೆ ಸಿಲುಕಿದ್ದಾನೆ. ಈ ಕಾರಣದಿಂದ ವಂಚನೆ ಬಯಲಾಗುವ ಆತಂಕದಿಂದ ಬ್ಯಾಂಕ್ ಆಡಳಿತ ಮಂಡಳಿ ಮುಖ್ಯಸ್ಥರಿಗೆ ಸತ್ಯಾಂಶವನ್ನು ತಿಳಿಸಿ, ತನಗೆ ಒಂದು ವರ್ಷಗಳ ಕಾಲಾವಕಾಶ ನೀಡಬೇಕು ಎಂದು ಕೇಳಿದ್ದಾನೆ.
ಇನ್ನು ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವಿದೇಶದಿಂದ ಮಂಗಳೂರಿಗೆ ಬಂದು ವಕೀಲರ ಮೂಲಕ ನ್ಯಾಯಾಲಯದ ಮುಂದೆ ಶರಣಾಗಿದ್ದಾನೆ. ಆರೋಪಿಯ ಹೆಚ್ಚಿನ ವಿಚಾರಣೆಗೆ ಪೊಲೀಸರು ಕಸ್ಟಡಿಗೆ ಪಡೆಯಲಿದ್ದಾರೆ. ಆರೋಪಿ ಪ್ರೀತಮ್ ಬ್ಯಾಂಕ್ನಿಂದ ಚಿನ್ನವನ್ನು ಎಗರಿಸಿ 3.5 ಕೋಟಿ ರೂ. ಸಾಲ ಪಡೆದ ಬಳಿಕ ಆ ಚಿನ್ನದ ಬದಲಿಗೆ ಅದೇ ಮಾದರಿಯ ನಕಲಿ ಚಿನ್ನವನ್ನು ಇಟ್ಟು ಗ್ರಾಹಕರಿಗೆ ಮೋಸ ಮಾಡಲು ಸಂಚು ರೂಪಿಸಿದ್ದ. ಇದಕ್ಕಾಗಿ 3.5 ಕೆ.ಜಿ. ರೋಲ್ಡ್ ಗೋಲ್ಡ್ ಚಿನ್ನವನ್ನು ತಯಾರಿಸಿದ್ದು, ಅದನ್ನು ಆರೋಪಿ ಶೇಖ್ ಮಹಮ್ಮದ್ನಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿ ಶೇಖ್ ಮಹಮ್ಮದ್ ಸೇರಿದಂತೆ ಇನ್ನಿಬ್ಬರ ಮುಖಾಂತರ ಬೇರೆ ಸಹಕಾರಿ ಸಂಘದಲ್ಲಿ ಚಿನ್ನ ಅಡವಿರಿಸಿದ್ದ. ಈ ಚಿನ್ನಾಭರಣದಲ್ಲಿ 2.200 ಕೆ.ಜಿ. ಚಿನ್ನವನ್ನು ಪೊಲೀಸರು ಮುಟ್ಟುಗೋಲು ಹಾಕಿದ್ದಾರೆ. ಇನ್ನು 4.300 ಕೆ.ಜಿ. ಚಿನ್ನಾಭರಣ ವಶಪಡಿಸಿಕೊಳ್ಳಲು ಬಾಕಿಯಿದ್ದು ಅದಕ್ಕಾಗಿ ಶೋಧ ನಡೆಯುತ್ತಿದೆ. ಆರೋಪಿ ಪ್ರಿತಮ್ ತನ್ನ ಆಪ್ತ ಶೇಖ್ ಮಹಮ್ಮದ್ಗೆ 50 ಗ್ರಾಂ ಚಿನ್ನಾಭರಣ ಉಡುಗೊರೆಯಾಗಿ ನೀಡಿದ್ದು, ಅದನ್ನು ಆತ ಸೀತಾಂಗೋಳಿ ಫೈನಾನ್ಸ್ನಲ್ಲಿಅಡವಿಟ್ಟಿದ್ದ. ಪೊಲೀಸರು ಅದನ್ನು ಕೂಡ ಮುಟ್ಟುಗೋಲು ಹಾಕಿದ್ದಾರೆ.