DAKSHINA KANNADA
ವಿಟ್ಲ – ಜಾಗದ ತಕರಾರು ಅಳಿಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಮಾವ
ಬಂಟ್ವಾಳ ಅಗಸ್ಟ್ 28 : ಜಾಗದ ತಕರಾರಿಗೆ ಸಂಬಂಧಿಸಿದಂತೆ ಸ್ವಂತ ಮಾವನೇ ಅಳಿಯನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಖಂಡಿಗ ಬಳಿ ನಡೆದಿದೆ.
ಘಟನೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸುರೇಶ್ ಪ್ರಭು ಯಾನೆ ಕಾಳೀಶ್ವರ ಸ್ವಾಮಿ ತನ್ನ ಮಗಳ ಗಂಡನ ಜೊತೆ ಜಮೀನಿನ ವಿಚಾರದಲ್ಲಿ ವೈಮನಸ್ಸು ಹೊಂದಿದ್ದ ಎಂದು ಹೇಳಲಾಗಿದ್ದು ಇದೇ ವಿಚಾರದಲ್ಲಿ ಕಾಳೀಶ್ವರ ಸ್ವಾಮಿ ಮತ್ತು ಆತನ ಸಹಚರರು ಮಗಳು ಕಿರಣ ಮತ್ತು ಆಕೆಯ ಪತಿ ಸುಳ್ಯ ಅಲೆಟ್ಟಿಯ ಪಟಕ್ಕುಂಜ ನಿವಾಸಿ ಚೇತನ್ ನಾಯಕ್(38) ಮೇಲೆ ದೊಣ್ಣೆ, ಕಬ್ಬಿಣ ರಾಡ್ ಮತ್ತು ಮಾರಕಾಸ್ತ್ರಗಳಿಂದ ಕಾಳೀಮಾತೆಯ ದೇವಸ್ಥಾನ ಎದುರಿನ ರಸ್ತೆಯಲ್ಲೇ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದ್ದಾರೆ. ರಕ್ತದ ಮಡುವಿನಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದ ಚೇತನನ್ನು ಸ್ಥಳೀಯರು ವಿಟ್ಲ ಸಮುದಾಯ ಆಸ್ಪತ್ರೆಗೆ ಕೊಂಡೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನಾ ಸ್ಥಳಕ್ಕೆ ಹೊಯ್ಸಳ ಪೊಲೀಸರು ಆಗಮಿಸಿ ಆರೋಪಿ ಕಾಳೀಶ್ವರ ಮತ್ತು ಆತನ ಸಹಚರರನ್ನು ವಶಕ್ಕೆ ಪಡೆದಿದ್ದಾರೆ.
You must be logged in to post a comment Login