Connect with us

    UDUPI

    ಬ್ರಹ್ಮಾವರ ವ್ಯಾಪ್ತಿಯ ವಿವಿಧ ಗ್ರಾಮಗಳ 450 ಮಂದಿಗೆ ಹಕ್ಕುಪತ್ರ ವಿತರಣೆ

    ಉಡುಪಿ, ಸೆಪ್ಟಂಬರ್ 9 : ಬ್ರಹ್ಮಾವರ ವ್ಯಾಪ್ತಿಯ ವಿವಿಧ ಗ್ರಾಮಗಳ 450 ಮಂದಿಗೆ ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ , ಶನಿವಾರ ಬ್ರಹ್ಮಾವರದ ಬಂಟರ ಭವನದಲ್ಲಿ ನಡೆದ ಸಭೆಯಲ್ಲಿ ಹಕ್ಕುಪತ್ರಗಳನ್ನು ವಿತರಿಸಿದರು.

    ನಂತರ ಮಾತನಾಡಿದ ಸಚಿವರು, ಬ್ರಹ್ಮಾವರ ವ್ಯಾಪ್ತಿಯ ವಿವಿಧ ಗ್ರಾಮಗಳ ಹಲವು ವರ್ಷಗಳಿಂದ ಸರಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡು, ಹಕ್ಕುಪತ್ರ ಇಲ್ಲದ ಕಾರಣ ಸರಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾದ 94 ಸಿ ಯಡಿ 285 ಮಂದಿಗೆ , 94 ಸಿಸಿ ಯಡಿ 127 ಮಂದಿಗೆ ಹಕ್ಕುಪತ್ರ ಹಾಗೂ 28 ಮಂದಿಗೆ ಸಾಗುವಳಿ ಚೀಟಿ ವಿತರಿಸಲಾಗುತ್ತಿದ್ದು, 30 ದಿನಗಳ ಒಳಗೆ ಇವರಿಗೆ ಆರ್.ಟಿ.ಸಿ ನೀಡಲಾಗುವುದು, 94 ಸಿ 94 ಸಿಸಿ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಸೆಪ್ಟಂಬರ್ 12 ರ ವರೆಗೆ ಕಾಲಾವಕಾಶವಿದ್ದು ಅರ್ಜಿ ಸಲ್ಲಿಸದೇ ಇರುವವರು ಕೂಡಲೇ ಅರ್ಜಿ ಸಲ್ಲಿಸುವಂತೆ ಸಚಿವರು ತಿಳಿಸಿದರು.

    ಹಕ್ಕುಪತ್ರ ಪಡೆದ ನಾಗರೀಕರು ಸರಕಾರದ ಬಸವ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ತೆರೆದ ಬಾವಿ ನಿರ್ಮಾಣ ಮುಂತಾದ ಯೋಜನೆಗಳ ಸೌಲಭ್ಯ ಪಡೆಯಬಹುದಾಗಿದ್ದು, ಸರಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

    ಬಡವರ , ಹಿಂದುಳಿದವರ ಅಭಿವೃದ್ಧಿಗಾಗಿ ಸರಕಾರ ಕಾರ್ಯ ನಿರ್ವಹಿಸುತ್ತಿದ್ದು, ಅವರಿಗೆ ಅರೋಗ್ಯ ಮತ್ತು ವಸತಿ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ, ಅರ್ಜಿ ಸಲ್ಲಿಸಿದ 2 ತಿಂಗಳ ಒಳಗಾಗಿ ಪಿಂಚಣಿ ಸೌಲಭ್ಯ ನೀಡಲಾಗುತ್ತಿದೆ ಎಂದು ಸಚಿವರು ಹೇಳಿದರು.

    ನವೆಂಬರ್ 4 ರಂದು 2ನೇ ಸುತ್ತಿನ ಹಕ್ಕುಪತ್ರ ವಿತರಣೆ

    ಬ್ರಹ್ಮಾವರ ವ್ಯಾಪ್ತಿಯಲ್ಲಿ 2 ನೇ ಸುತ್ತಿನ ಹಕ್ಕುಪತ್ರ ವಿತರಣೆಯ ಕಾರ್ಯಕ್ರಮ ನವೆಂಬರ್ 4 ರಂದು ನಡೆಯಲಿದ್ದು, ಡಿಸಿ ಮನ್ನಾ ಜಾಗ, ಗೋಮಾಳ, ಪರಂಬೋಕು ಜಾಗದ ಹಕ್ಕುಪತ್ರ ವಿತರಣೆ ನಿಧಾನವಾಗಲಿದ್ದು, ಡ್ರೀಮ್ಡ್ ಫಾರೆಸ್ಟ್ ಪ್ರದೇಶದಲ್ಲಿ ನಿರ್ಮಿಸಿರುವ ಮನೆಗಳಿಗೆ ಹಕ್ಕುಪತ್ರ ನೀಡುವ ಕುರಿತಂತೆ ಸರ್ವೋಚ್ಛ ನ್ಯಾಯಾಲಯದಲ್ಲಿ ಅಫೀಲು ಸಲ್ಲಿಸಲಾಗಿದೆ ಎಂದು ಸಚಿವರು ತಿಳಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply