LATEST NEWS
ಸಾಮಾಜಿಕ ಕಾರ್ಯಕರ್ತ ಉದಯಗಾಣಿಗ ಕೊಲೆ ಪ್ರಕರಣ ಪ್ರಮುಖ ಆರೋಪಿಗಳು 2 ದಿನ ಪೊಲೀಸ್ ಕಸ್ಟಡಿಗೆ

ಉಡುಪಿ ಜೂನ್ 17:ಸಾಮಾಜಿಕ ಕಾರ್ಯಕರ್ತ ಯಡಮೊಗೆಯ ಹೊಸಬಾಳು ನಿವಾಸಿ ಉದಯ ಗಾಣಿಗ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳನ್ನು 2 ದಿನ ಪೊಲೀಸ್ ಕಸ್ಟಡಿಗೆ ನೀಡಿ ಕುಂದಾಪುರದ ಜೆಎಂಎಫ್ಸಿ ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ಪ್ರಮುಖ ಆರೋಪಿಗಳಾದ ಯಡಮೊಗೆ ಗ್ರಾ.ಪಂ. ಅಧ್ಯಕ್ಷ ಪ್ರಾಣೇಶ್ ಯಡಿಯಾಳ್ ಹಾಗೂ ರಾಜೇಶ್ ಭಟ್ ಅನ್ನು ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಲಾಗಿದೆ.

ಪ್ರಕರಣದ ಕುರಿತಂತೆ ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ನ್ಯಾಯಾಂಗ ಬಂಧನದಲ್ಲಿದ್ದ ಈ ಇಬ್ಬರು ಆರೋಪಿಗಳನ್ನು ಕಸ್ಟಡಿಗೆ ನೀಡುವಂತೆ ಕೋರಿಕೊಂಡಿದ್ದರು. ಈ ಕುರಿತಂತೆ ವಿಚಾರಣೆ ನಡೆಸಿದ ನ್ಯಾಯಾಧೀಶೆ ನಾಗರತ್ನಮ್ಮ ಅವರು ಪೊಲೀಸ್ ಕಸ್ಟಡಿಗೆ ನೀಡುವಂತೆ ಆದೇಶಿಸಿದ್ದಾರೆ.ಪ್ರಾಸಿಕ್ಯೂಶನ್ ಪರ ಸಹಾಯಕ ಸರಕಾರಿ ಅಭಿಯೋಜಕಿ ಮಮ್ತಾಜ್ ಅವರು ವಾದಿಸಿದರು.
ಜೂನ್ 5 ರಂದು ಯಡಮೊಗೆಯಲ್ಲಿ ಉದಯ ಗಾಣಿಗ ಅವರನ್ನು ಕಾರು ಹತ್ತಿಸಿ, ದೊಣ್ಣೆಯಿಂದ ಹೊಡೆದು ಕೊಲೆಗೈಯ್ಯಲಾಗಿತ್ತು, ಪ್ರಕರಣ ಸಂಬಂಧ ಪ್ರಾಣೇಶ್ ಯಡಿಯಾಳ್, ರಾಜೇಶ್ ಭಟ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಾಲಚಂದ್ರ ಭಟ್, ಮನೋಜ್ ಕುಮಾರ್ ಹಾಗೂ ಗ್ರಾ.ಪಂ. ಸದಸ್ಯ ಸದಾಶಿವ ನಾಯ್ಕ್ ರನ್ನು ಪೊಲೀಸರು ಬಂಧಿಸಿದ್ದರು.