BANTWAL
ಪಾಣೆಮಂಗಳೂರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಮಹಿಳೆ ಶವ ಪತ್ತೆ
ಬಂಟ್ವಾಳ: ಪಾಣೆ ಮಂಗಳೂರು ನೂತನ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಮಹಿಳೆಯ ಮೃತ ದೇಹ ಇಂದು ಪತ್ತೆಯಾಗಿದೆ. ಮೃತ ಮಹಿಳೆಯನ್ನು ಮೂಡ ಗ್ರಾಮದ ನಿವಾಸಿ ಗೋಪಿ ಪೂಜಾರಿ(49) ಎಂದು ಗುರುತಿಸಲಾಗಿದೆ. ಇವರು ಬಿ. ಸಿರೋಡಿನ ಚಿಕ್ಕಯ್ಯಮಠ ಎಂಬಲ್ಲಿ ತನ್ನ ಸಹೋದರಿಯ ಮನೆಗೆ ಕಳೆದ ಕೆಲ ದಿನಗಳ ಹಿಂದೆ ಬಂದಿದ್ದರು. ಕಳೆದ ಶನಿವಾರ ಬೆಳಿಗ್ಗೆಯಿಂದ ಇವರು ನಾಪತ್ತೆಯಾಗಿದ್ದರು.
ಈ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟ ನಡೆಸಿದಾಗ ಪಾಣೆಮಂಗಳೂರು ನೂತನ ಸೇತುವೆ ಬಳಿ ಆಕೆ ಧರಿಸಿದ್ದ ಶಾಲು ಹಾಗೂ ಕೈಯಲ್ಲಿದ್ದ ಬಳೆ ಪತ್ತೆಯಾಗಿತ್ತು. ಈ ಹಿನ್ನಲೆಯಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಸಂಶಯ ಮನೆಯವರು ವ್ಯಕ್ತಪಡಿಸಿದ್ದರು. ಹೀಗಾಗಿ ಮುಳುಗುತಜ್ಞರು ಹುಡುಕಾಟ ನಡೆಸಿದ್ದರು. ಆದರೆ ಮಹಿಳೆಯ ಬಗ್ಗೆ ಯಾವುದೇ ಸುಳಿವು ದೊರಕಿರಲಿಲ್ಲ.
ಮಹಿಳೆ ಈ ಹಿಂದೆಯೂ ಒಮ್ಮೆ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದರು ಎಂದು ಹೇಳಲಾಗಿದ್ದು, ಇಂದು ತುಂಬೆ ಸಮೀಪ ನದಿಯಲ್ಲಿ ಶವ ಪತ್ತೆಯಾಗಿದೆ. ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login