BANTWAL
ಕಂಬಳ ಭೂಮಿಯಲ್ಲಿ ನಡೆಯಿತು ನಾಗ ಪವಾಡ.. ಹಳೇ ಜಾಗದಲ್ಲೇ ಕಂಬಳ ನಡೆಸಲು ಸಿಕ್ತು ಗ್ರೀನ್ ಸಿಗ್ನಲ್.!
ಬೆಳ್ತಂಗಡಿ: ಪರಶುರಾಮ ಸೃಷ್ಟಿ ತುಳುನಾಡಿನ ಜಾನಪದ ಕ್ರೀಡೆ ಕಂಬಳಕ್ಕೂ ಹೊಂದಿಕೊಂಡು ದೈವಾರಾಧನೆ ಮತ್ತು ನಾಗಾರಾಧನೆಗಳಿವೆ. ಇದೇ ನಂಬಿಕೆಗಳ ಪ್ರತೀಕವಾಗಿದ್ದ ಒಂದೂವರೆ ಶತಮಾನದ ಇತಿಹಾಸವಿರುವ ದಕ್ಷಿಣ ಕನ್ನಡದ ಹೊಕ್ಕಾಡಿಗೋಳಿ ಕಂಬಳಕ್ಕೆ ಏದುರಾಗಿದ್ದ ಅನೇಕ ತೊಡಕುಗಳು ದೈವ ಕಾರ್ಣಿಕ ಎಂಬಂತೆ ನಿವಾರಣೆಯಾಗಿದೆ.
ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕಿನ ಭಾಗದಲ್ಲಿರುವ ಹೊಕ್ಕಾಡಿಗೋಳಿ ಎಂಬ ಸ್ಥಳದಲ್ಲಿ ಪೂಂಜ ಶ್ರೀ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನ ಹಾಗೂ ಮೂಜಿಳ್ನಾಳ ದೈವಗಳಿಗೆ ಸಂಬಂಧಿಸಿದ ವರ್ಷಂಪ್ರತಿ ನಡೆಯುವ ಈ ಕಂಬಳಕ್ಕೆ ನೂರೈವತ್ತು ವರ್ಷಗಳ ಇತಿಹಾಸವಿದೆ. ಆದ್ರೆ ಈ ಬಾರಿ ಕಾರಣಾಂತರಗಳಿಂದ ಹೊಕ್ಕಾಡಿಗೋಳಿ ಕಂಬಳ ಗೊಂದಲಮಯವಾಗಿತ್ತು. ಕಂಬಳ ನಡೆಯುವ ಜಾಗಕ್ಕೆ ಸಂಬಂಧಿಸಿದ ಆಂತರಿಕ ಜಗಳಗಳಿಂದ ಸಾಂಪ್ರದಾಯಿಕವಾಗಿ ನಡೆಯುತ್ತಿದ್ದ ಜಾಗವನ್ನು ಬದಲಿಸಬೇಕಾದ ಪರಿಸ್ಥಿತಿ ಬಂದಿತ್ತು.
ಪ್ರತೀ ವರ್ಷ ಡಿಸೆಂಬರ್ ಆರಂಭದಲ್ಲಿ ನಡೆಯುತ್ತಿದ್ದ ಕಂಬಳ ಮಾರ್ಚ್ ತಿಂಗಳಲ್ಲಿ ಹೊಸ ಕರೆಯಲ್ಲಿ ನಡೆಸುವುದೆಂದು ತೀರ್ಮಾನಿಸಲಾಗಿತ್ತು. ಹೊಸ ಕರೆ ನಿರ್ಮಾಣಕ್ಕೆ ಜಾಗ ಗುರುತು ಮಾಡಲಾಗಿದ್ದರೂ ಆರಂಭದಿಂದಲೂ ಹಲವು ಅಡೆತಡೆಗಳು ಎದುರಾಗಲು ಶುರುವಾದರೆ ಇದೇ ಹೊತ್ತಿಗೆ ಸಾಂಪ್ರದಾಯಿಕ ಕಂಬಳ ನಡೆಯುವ ಜಾಗದಲ್ಲಿ ನಾಗಗಳ ಓಡಾಟ ಜಾಸ್ತಿಯಾಯಿತು. ಇದರಿಂದ ಭಯಗೊಂಡ ಜಾಗದ ಮಾಲಿಕರು ಕಂಬಳ ನಡೆಸಲು ಅನುವು ಮಾಡಿಕೊಟ್ಟಿದ್ದಾರೆ.ಸಾಂಪ್ರದಾಯಿಕ ಕಂಬಳ ನಡೆಯದೆ ಭಯದಲ್ಲಿ ಇದ್ದ ಊರವರೂ ಇದರಿಂದ ನಿಟ್ಟುಸಿರು ಬಿಟ್ಟಿದ್ದು ಸದ್ಯ ಕಂಬಳದ ಕರೆ ಪೂಜೆಯನ್ನೂ ನೆರವೇರಿಸಿದ್ದಾರೆ. ಪೂಂಜ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನದ ಅಸ್ರಣ್ಣ ಕೃಷ್ಣಪ್ರಸಾದ್ ಭೂಮಿ ಪೂಜೆ ನೆರವೇರಿಸಿದ್ದಾರೆ. ನೋಣಾಲ್ ಗುತ್ತು ರಶ್ಮಿತ್ ಶೆಟ್ಟಿ ಕೈತ್ರೋಡಿಯವರ ನೇತೃತ್ವದಲ್ಲಿ ಗುಂಡ್ಯಾರು ಸಂಜೀವಶೆಟ್ಟಿಯವರ ಗೌರವಾಧ್ಯಕ್ಷತೆಯಲ್ಲಿ ಹೊಕ್ಕಾಡಿಗೋಳಿ ಕಂಬಳ ನಡೆಯಲಿದೆ.ಈಗಾಗಲೇ ಹೊಕ್ಕಾಡಿಗೋಳಿ ಕಂಬಳಕ್ಕೆ ದಿನಾಂಕ ನಿಗದಿಯಾಗಿರುವಂತೆ ಮಾರ್ಚ್ 16, 17 ರಂದು ಮೊದಲು ನಡೆಯುತ್ತಿದ್ದ ಜಾಗದಲ್ಲೇ ಕಂಬಳ ನಡೆಸುತ್ತೇವೆಂದು ಸಂಘಟಕರು ತಿಳಿಸಿದ್ದಾರೆ. ಸದ್ಯ ಈ ಬೆಳವಣಿಗೆಯಿಂದ ಕಂಬಳಾಭಿಮಾನಿಗಳು ಫುಲ್ ಖುಷ್ ಆಗಿದ್ದರೆ ತುಳು ನಾಡಿನ ದೈವದೇವರುಗಳ ಮೇಲೆ ಆಸ್ತಿಕರ ನಂಬಿಕೆನೂ ಜಾಸ್ತಿಯಾಗಿದೆ. .
You must be logged in to post a comment Login