Connect with us

    KARNATAKA

    ಯಡಿಯೂರಪ್ಪ, ವಿಜಯೇಂದ್ರ ಕಪಿ ಮುಷ್ಟಿಯಲ್ಲಿರುವ ರಾಜ್ಯ ಬಿಜೆಪಿಯ ಬಿಡುಗಡೆಗಾಗಿ ನನ್ನ ಸ್ಪರ್ಧೆ  : ಕೆ.ಎಸ್.ಈಶ್ವರಪ್ಪ ಕಿಡಿ

    ಶಿವಮೊಗ್ಗ: ರಾಜ್ಯ ಬಿಜೆಪಿ ಯಡಿಯೂರಪ್ಪ ಹಾಗೂ ವಿಜಯೇಂದ್ರರ ಕಪಿ ಮುಷ್ಟಿಯಲ್ಲಿದ್ದು ಇದನ್ನು ಬಿಡುಗಡೆಗೊಳಿಸಲು ನಾನು ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಘೋಷಿಸಿದ್ದಾರೆ.

    ತಮ್ಮ ನಿವಾಸದಲ್ಲಿಂದು ಮಾತನಾಡಿದ ಅವರು, “ಮೊನ್ನೆ ನಡೆದ ಸಭೆಯ ನಂತರ ನಿರೀಕ್ಷೆ ಮೀರಿ ಸ್ಪಂದನೆ ದೊರೆತಿದೆ. ನಾನು‌ ಚುನಾವಣೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಸಭೆಯ ಬಳಿಕ ಯಡಿಯೂರಪ್ಪನವರು ಸಂಧಾನಕ್ಕಾಗಿ ಆರಗ ಜ್ಞಾನೇಂದ್ರ ಅವರನ್ನು ಕಳುಹಿಸಿದ್ದರು. ನಾನು ಅವರ ಸಂಧಾನಕ್ಕೆ ಒಪ್ಪಿಲ್ಲ. ನನ್ನ ಮಗನಿಗೆ ಟಿಕೆಟ್ ತಪ್ಪಿಸಿದ್ದು ಮಾತ್ರವಲ್ಲ, ನನಗೆ ಅವರು ಮೋಸ ಮಾಡಿದ್ದಾರೆ. ಯಡಿಯೂರಪ್ಪ ಹಾಗೂ ಅವರ ಮಗನ ಕೈಯಲ್ಲಿ ಪಕ್ಷ ನಲುಗುತ್ತಿದೆ. ಲಿಂಗಾಯತರೆಲ್ಲರೂ ಯಡಿಯೂರಪ್ಪನವರ ಕೈಯಲ್ಲಿದ್ದಾರೆಂಬ ಭ್ರಮೆಯಲ್ಲಿ ಕೇಂದ್ರದ ನಾಯಕರಿದ್ದಾರೆ. ಲಿಂಗಾಯತರೇ ಬೇಕಿದ್ದರೆ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಅಧ್ಯಕ್ಷ ಸ್ಥಾನ ನೀಡಬಹುದಿತ್ತು. ಒಕ್ಕಲಿಗರಿಗೆ ಅಧ್ಯಕ್ಷ ಸ್ಥಾನ ನೀಡಬಹುದಿತ್ತು. ಸಿ.ಟಿ.ರವಿಗೆ ಅಧ್ಯಕ್ಷ ಸ್ಥಾನ ನೀಡಬಹುದಿತ್ತು. ಹಿಂದುಳಿದ ನಾಯಕನಾದ ನನ್ನನ್ನು ಅಧ್ಯಕ್ಷ ಮಾಡಬಹುದಿತ್ತು. ನಾನು ನನ್ನ ಪಕ್ಷಕ್ಕೆ ನಿಯತ್ತಾಗಿ ಇದ್ದೇನೆ” “ಅವರು ಹೇಳಿದ ಹಾಗೆ ಕೇಳಿದ್ದೇನೆ. ಪಕ್ಷ ನಿಷ್ಠೆಯಿಂದ ಹಲವಾರು ವರ್ಷಗಳಿಂದ ಇದ್ದೇನೆ. ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ಅವರ ಮಗ ವಿಜಯೇಂದ್ರರದ್ದೇ ಕಾರುಬಾರು ಆಗಿ ಹೋಗಿದೆ. ನೊಂದ ಕಾರ್ಯಕರ್ತರು ಇವರಿಂದ ನಲುಗಿ ಹೋಗಿದ್ದಾರೆ. ರಾಜ್ಯದಲ್ಲಿ ನೊಂದ ಕಾರ್ಯಕರ್ತರು ನನಗೆ ದೂರವಾಣಿ ಕರೆ ಮಾಡಿ, ಏನ್ ಸಾರ್ ಕೆಟ್ಟ ರಾಜಕಾರಣ ನಡೀತಿದೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ನಾನು ಈ ರಾಜಕಾರಣದ ವಿರುದ್ಧ ಚುನಾವಣೆಗೆ ಸ್ಪರ್ದಿಸುತ್ತಿದ್ದೇನೆ” ಎಂದು ತಿಳಿಸಿದರು. ನನಗೆ ವಿವಿಧ ಮಠಾಧೀಶರು ಸಹ ಆಶೀರ್ವಾದ ಮಾಡಿದ್ದಾರೆ ಎಂದಿದ್ದಾರೆ.

    ಪ್ರಧಾನಿ ಮೋದಿ ಅವರೇ ಕರೆ ಮಾಡಿದ್ರೆ ಏನ್ ಮಾಡ್ತೀರಿ ಎಂಬ ಪ್ರಶ್ನೆಗೆ  ಉತ್ತರಿಸಿದ ಈಶ್ವರಪ್ಪ ನರೇಂದ್ರ ಮೋದಿ ನಮ್ಮ ವಿಶ್ವ ನಾಯಕ. ನಮ್ಮ ರಾಜ್ಯ ಮತ್ತು ದೇಶದ ಪ್ರತಿಯೊಬ್ಬ ರಾಷ್ಟ್ರಭಕ್ತರು ಮೋದಿ ಅವರನ್ನು ನಮ್ಮ ನಾಯಕ ಎಂದು ಒಪ್ಪಿಕೊಂಡಿದ್ದಾರೆ. ಒಂದು ವೇಳೆ ನನ್ನ ಮನವೊಲಿಕೆಗೆ ನರೇಂದ್ರ ಮೋದಿ ಅವರೇ ಕರೆ ಮಾಡಿದ್ರೆ, ರಾಜ್ಯದ ಬಿಜೆಪಿಯಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಹೇಳುತ್ತೇನೆ ಎಂದರು. ಚುನಾವಣೆಗೆ ನಿಲ್ತೀನಿ, ಗೆಲ್ತೀನಿ ಅದರಲ್ಲೂ ಹಿಂದುತ್ವದ ಪರವಾಗಿ, ಹಿಂದುಳಿದವರ ಪರವಾಗಿ, ಬಿಜೆಪಿ ಕಾರ್ಯಕರ್ತರ ಪರವಾಗಿ ಮತ್ತು ರಾಜ್ಯದ ಬಿಜೆಪಿಯ ಶುದ್ಧೀಕರಣಕ್ಕಾಗಿ ಚುನಾವಣೆ ನಿಲ್ಲುತ್ತಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ, ಗೆದ್ದು ಬಂದು ನಿಮ್ಮ ಜೊತೆ ಸೇರಿಕೊಳ್ಳುತ್ತೇನೆ ಎಂದು  ಹೇಳುತ್ತೇನೆ. ನಿಮ್ಮನ್ನು ಪ್ರಧಾನಿ ಮಂತ್ರಿ ಮಾಡೋಕೆ ಶಿವಮೊಗ್ಗದ ಜನರು ಖಂಡಿತ ನನಗೊಂದು ಅವಕಾಶ ಕೊಡುತ್ತಾರೆ. ಚುನಾವಣೆಗೆ ನಿಲ್ತೀನಿ ಮತ್ತು ಗೆಲ್ಲುತ್ತೇನೆ ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply