Connect with us

LATEST NEWS

ಮಂಗಳೂರು ಸಿಸಿಬಿ ಕಾರ್ಯಾಚರಣೆ: 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಸೆರೆ..!! 

ಮಂಗಳೂರು : ಮಹತ್ವದ ಕಾರ್ಯಾಚರಣೆಯೊಂದರಲ್ಲಿ  ಸುಮಾರು 30 ವರ್ಷಗಳ ಹಿಂದೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಎಂಆರ್ ಪಿಎಲ್ ಬಳಿಯಲ್ಲಿ ನಡೆದ ಕೊಲೆ ಹಾಗೂ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿ ದಸ್ತಗಿರಿಯಾಗದೇ 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ದಸ್ತಗಿರಿ ಮಾಡುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಪ್ರಕರಣ 1 :
ಮಂಗಳೂರು ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಭಾಳ ಗ್ರಾಮದಲ್ಲಿ ಎಂಆರ್ ಪಿಎಲ್ ಟೌನ್ ಶಿಪ್ ಸೈಟ್ ಪರಿಸರದಲ್ಲಿ ರಕ್ಷಕ್ ಇಂಡಸ್ಟ್ರೀಯಲ್ ಸೆಕ್ಯೂರಿಟಿ ಇನ್ಸಿಟ್ಯೂಟ್ ಮಾಲಕರಾದ ಶ್ರೀ ಅಬ್ದುಲ್ಲಾ ರವರು 5 ಮಂದಿ ಸೆಕ್ಯೂರಿಟಿ ಗಾರ್ಡ್ ಗಳನ್ನು ಡೆಲ್ಲಿ ಮೂಲದ  ಮೆಸರ್ಸ್ ಸ್ಕೈಲೈನ್ ಇಂಟಿರಿಯರ್ಸ್ ಮತ್ತು ಕನ್ಸ್ ಸ್ಟ್ರಕ್ಷನ್  ಕಂಪೆನಿಯಲ್ಲಿ ನೇಮಿಸಿದ್ದರು. ದಿನಾಂಕ: 12-03-1995 ರಂದು ರಾತ್ರಿ 10-30 ಗಂಟೆ ಸುಮಾರಿಗೆ ಈ ಸೈಟ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ನವರಾದ ಸುರೇಶ್, ನಾರಾಯಣ ಹಾಗೂ ದೇವಣ್ಣ ರವರು ಕೆಲಸ ಮಾಡಿಕೊಂಡಿದ್ದ ಸಮಯ ಮೂರು ಮಂದಿ ಅಪರಿಚಿತರು ಎಂ ಆರ್ ಪಿ ಎಲ್ ಟೌನ್ ಶಿಪ್ ಸೈಟ್ ಪರಿಸರದಲ್ಲಿ ಬಂದಾಗ ಈ ರಾತ್ರಿ ವೇಳೆಯಲ್ಲಿ ಯಾಕೆ ಇಲ್ಲಿಗೆ ಬಂದಿದ್ದೀರಿ ಎಂದು ಸೆಕ್ಯೂರಿಟಿ ಗಾರ್ಡ್ ರವರು ವಿಚಾರಿಸಿದ ಸಮಯ 2 ಮಂದಿ ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ರವರಲ್ಲಿ ಜಗಳ ಮಾಡಿ ಸೆಕ್ಯೂರಿಟಿ ಗಾರ್ಡ್ ಗಳಿಗೆ ಹಲ್ಲೆ ನಡೆಸಿದ್ದು, ಈ ಪೈಕಿ ಗಂಭೀರ ಗಾಯಗೊಂಡ ನಾರಾಯಣ ರವರು ಕೊಲೆಯಾಗಿದ್ದರು. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ 2 :
ದಿನಾಂಕ: 12-03-1995 ರಂದು ರಾತ್ರಿ ಮೇಲ್ಕಂಡ ಪ್ರಕರಣದ ಆರೋಪಿಗಳ ಪೈಕಿ ಅಚ್ಚನ್ ಕುಂಞ ಮತ್ತು ಜೋಸ್ ಕುಟ್ಟಿ ಎಂಬವರು ತಾವು ಕೆಲಸ ಮಾಡುತ್ತಿದ್ದ ಎಂ ಆರ್ ಪಿ ಎಲ್ ಸೈಟ್ ನಲ್ಲಿರುವ ಕ್ಯಾಂಟೀನ್ ಬಳಿಯಲ್ಲಿ ಮಲಗಿದ್ದ ಕೂಲಿ ಕೆಲಸದವರ ಜೊತೆ ಗಲಾಟೆ ಮಾಡುತ್ತಿದ್ದು, ಈ ಸಮಯ ಗಲಾಟೆ ಮಾಡದಂತೆ ತಡೆಯಲು ಬಂದಿದ್ದ ಆರೋಪಿಗಳ ಭಾವನಾದ ತೋಮಸ್ ಎಂಬವರಿಗೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದು, ನಂತರ ಗಂಭೀರ ಗಾಯಗೊಂಡ ತೋಮಸ್ ರವರು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಗ್ಗೆ ಅಚ್ಚನ್ ಕುಂಞ ಮತ್ತು ಜೋಸ್ ಕುಟ್ಟಿ ರವರ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ. ಇದೇ ಆರೋಪಿಗಳು ಮೇಲ್ಕಂಡ ಸೆಕ್ಯೂರಿಟಿ ಗಾರ್ಡ್ ನಾರಾಯಣ ಎಂಬವರಲ್ಲಿ ಜಗಳ ಮಾಡಿ ಹಲ್ಲೆ ನಡೆಸಿ ಕೊಲೆ ಮಾಡಿದ್ದರು.
ಈ ಕೊಲೆ ಕೃತ್ಯ ಹಾಗೂ ಹಲ್ಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳು ನಂತರ ದಸ್ತಗಿರಿಯಾಗದೇ ತಲೆಮರೆಸಿಕೊಂಡಿದ್ದರು. ಆರೋಪಿಗಳ ಪತ್ತೆಗೆ ಪೊಲೀಸರು ಮಾಹಿತಿಯನ್ನು ಸಂಗ್ರಹಿಸಿ ಪತ್ತೆಗೆ ಪ್ರಯತ್ನಿಸಿದ್ದರೂ ಆರೋಪಿಗಳು ಪತ್ತೆಯಾಗಿರಲಿಲ್ಲ. ಆರೋಪಿಗಳು ಕೃತ್ಯ ನಡೆಸಿದ ನಂತರ ಅವರ ಊರಾದ ಕೇರಳಕ್ಕೆ ಹೋಗಿ ವಿವಿಧ ಕಡೆಗಳಲ್ಲಿ  ಹಾಗೂ ಗುಜರಾತ್, ರಾಜಸ್ಥಾನ, ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದರು. ಆರೋಪಿಗಳ ವಿರುದ್ಧ ಎಲ್ ಪಿ ಸಿ ವಾರಂಟ್ ಜ್ಯಾರಿಯಲ್ಲಿತ್ತು.
ಆರೋಪಿಗಳ ಪೈಕಿ ಅಚ್ಚನ್ ಕುಂಞ ಎಂಬಾತನು ಸುಮಾರು 8 ವರ್ಷದ ಹಿಂದೆ ಮೃತಪಟ್ಟಿದ್ದನು. ಇನ್ನೋರ್ವ ಆರೋಪಿ. ಜೋಸ್ ಕುಟ್ಟಿ ಎಂಬಾತನು ತಲೆಮರೆಸಿಕೊಂಡಿದ್ದನು. ಈತನ ಬಗ್ಗೆ ಸುಮಾರು 4 ತಿಂಗಳಿಂದ ಮಾಹಿತಿ ಸಂಗ್ರಹಿಸಿದ ಮಂಗಳೂರು ಸಿಸಿಬಿ ಪೊಲೀಸರು ದಿನಾಂಕ: 23-10-2024 ರಂದು ಕೇರಳ ರಾಜ್ಯದ ಎರ್ನಾಕುಳಂ ಜಿಲ್ಲೆಯ ತ್ರಿಪ್ಪುಳಿತ್ತುರಂ ಎಂಬಲ್ಲಿಂದ ಆರೋಪಿ ಜೋಸ್ ಕುಟ್ಟಿ ಪಾಪಚ್ಚನ್(55), ತಂದೆ ಪಾಪಚ್ಚನ್, ವಾಸ: ಕುರುವ ಮೂಲ ಹೌಸ್, ಕೈತಕೋಡ್ ಪೋಸ್ಟ್, ಪುತ್ತೂರು ಕೊಟ್ಟಾರಕ್ಕರ ಕೊಲ್ಲಂ, ಕೇರಳ ರಾಜ್ಯ ಎಂಬಾತನನ್ನು ದಸ್ತಗಿರಿ ಮಾಡಿ ಮುಂದಿನ ಕ್ರಮಕ್ಕಾಗಿ ಸುರತ್ಕಲ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿರುತ್ತಾರೆ.

ಆರೋಪಿ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿಯವರಾದ ಶ್ರೀ ಮನೋಜ್ ಕುಮಾರ್ ನಾಯ್ಕ್, ಪೊಲೀಸ್ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ಹೆಚ್ ಎಂ, ಎಎಸ್ಐ ಮೋಹನ್ ಕೆ ವಿ ಹಾಗೂ ಸಿಸಿಬಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು. 30 ವರ್ಷಗಳ ಹಳೆಯ ಪ್ರಕರಣದ ಆರೋಪಿ ಜೋಸ್ ಕುಟ್ಟಿ ಪಾಪಚ್ಚನ್ ಎಂಬಾತನನ್ನು ಪತ್ತೆ ಹಚ್ಚಿದ ಸಿಸಿಬಿ ಪೊಲೀಸರ ಕಾರ್ಯವನ್ನು ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಅನುಮಪ್ ಅಗ್ರವಾಲ್, ಐಪಿಎಸ್ ರವರು ಶ್ಲಾಫಿಸಿರುತ್ತಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *