LATEST NEWS
ಸ್ವಚ್ಚಭಾರತ್ ಅಭಿಯಾನದಲ್ಲಿ ಒಂದು ವರ್ಷದ ಮಗುವನ್ನು ಎದೆಗೆ ಕಟ್ಟಿಕೊಂಡು ಕಸ ಗುಡಿಸಿದ ತಾಯಿ

ಸ್ವಚ್ಚಭಾರತ್ ಅಭಿಯಾನದಲ್ಲಿ ಒಂದು ವರ್ಷದ ಮಗುವನ್ನು ಎದೆಗೆ ಕಟ್ಟಿಕೊಂಡು ಕಸ ಗುಡಿಸಿದ ತಾಯಿ
ಮಂಗಳೂರು ಡಿಸೆಂಬರ್ 26: ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಸ್ವಚ್ಛ ಭಾರತ್ ಅಭಿಯಾನಕ್ಕೆ ದೇಶದೆಲ್ಲೆಡೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಈ ಸ್ವಚ್ಛ ಭಾರತ್ ಅಭಿಯಾನದಡಿ ದೇಶದ ಹಲವು ನಗರಗಳಲ್ಲಿ ಪ್ರತಿವಾರ ಜನರು ತಮ್ಮನ್ನು ತೊಡಗಿಸಿಕೊಂಡು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.
ಈ ನಡುವೆ ಮಂಗಳೂರಿನಲ್ಲಿ ಪ್ರತಿ ವಾರ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ ನಡೆಸುತ್ತಿದೆ. 4 ನೇ ಹಂತದ 8 ನೇ ರವಿವಾರದ ಶ್ರಮದಾನ ಸಂದರ್ಭದಲ್ಲಿ ತೆಗೆದ ಫೊಟೊ ಇಡೀ ದೇಶವನ್ನೇ ಆಕರ್ಷಿಸುತ್ತಿದೆ. ತಾಯಿಯೊಬ್ಬಳು ತನ್ನ 1 ವರ್ಷದ ಮಗುವನ್ನು ಎದೆಗೆ ಕಟ್ಟಿಕೊಂಡು ಕಸ ಗುಡಿಸುತ್ತಿರುವ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಂಗಳೂರಿನ ಹಂಪನಕಟ್ಟೆ ಪರಿಸರದಲ್ಲಿ ಆಯೋಜಿಸಲಾಗಿದ್ದ ಸ್ವಚ್ಛ ಮಂಗಳೂರು ಅಭಿಯಾನದ ಶ್ರಮದಾನ ಕಾರ್ಯಕ್ರಮದಲ್ಲಿ ಸುದೀಕ್ಷಾ ಹಾಗೂ ಕಿರಣ್ ಪೂಜಾರಿ ದಂಪತಿ ತಮ್ಮ ಒಂದು ವರ್ಷದ ಪುಟ್ಟ ಮಗು ‘ನಕ್ಷ’ ಳೊಂದಿಗೆ ಪಾಲ್ಗೊಂಡಿದ್ದರು . ಮಗುವನ್ನು ಎದೆಗೆ ಕಟ್ಟಿಕೊಂಡು ಸುದೀಕ್ಷಾ ರಸ್ತೆಯ ಕಸ ಗುಡಿಸುತ್ತಿದ್ದರೆ, ಪತ್ನಿ ಗುಡಿಸಿದ ಕಸ ವನ್ನು ಪತಿ ಕಿರಣ್ ಪೂಜಾರಿ ಸಂಗ್ರಹಿಸುತ್ತಿದ್ದರು.
ಕ್ಯಾಮರಾ ಕಣ್ಣಿಗೆ ಸಿಕ್ಕ ಸುದೀಕ್ಷಾ ಅವರ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿದೆ . ಸಂಸದ ನಳಿನ್ ಕುಮಾರ್ ಕಟೀಲ್ ಈ ಪೋಟೋವನ್ನು ಟ್ವೀಟ್ ಮಾಡಿ ನಿಜವಾದ ಮಿಸ್ ಇಂಡಿಯಾ ಇವರೇ ಎಂದು ಟ್ವೀಟ್ ಮಾಡಿದ್ದಾರೆ. ಸ್ವಚ್ಛ ಭಾರತ್ ಅಭಿಯಾನಕ್ಕೆ ದಂಪತಿ ಯ ಕೊಡುಗೆ ಪ್ರಶಂಸೆಗೆ ಪಾತ್ರವಾಗಿದೆ.