DAKSHINA KANNADA
ಪೋಲೀಸ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸಂಸದ ನಳಿನ್.
ಮಂಗಳೂರು,ಸೆಪ್ಟಂಬರ್ 7: ಬಿಜೆಪಿ ಯುವಮೋರ್ಚಾದ ಬೈಕ್ ರಾಲಿಯಲ್ಲಿ ಪಾಲ್ಗೊಳ್ಳಲು ಬಂದ ಬಿಜೆಪಿ ಕಾರ್ಯಕರ್ತರನ್ನು ಹಾಲ್ ಒಂದರಲ್ಲಿ ಕೂಡಿಟ್ಟ ಪೋಲೀಸರನ್ನು ದಕ್ಷಿಣಕನ್ನಡ ಸಂಸದ ನಳಿನ್ ಕುಮಾರ್ ತರಾಟೆಗೆ ತೆಗೆದುಕೊಂಡ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕದ್ರಿ ಪೋಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮಾರುತಿ ನಾಯಕ್ ಇಂದು ಮಂಗಳೂರಿನಲ್ಲಿ ನಡೆಯುವ ಬೈಕ್ ರಾಲಿಗೆ ಪಾಲ್ಗೊಳ್ಳಲು ಮಂಗಳೂರಿಗೆ ಬಂದಿದ್ದಂತಹ ಹೊರ ಜಿಲ್ಲೆಗಳ ಮಹಿಳಾ ಕಾರ್ಯಕರ್ತರು ಸೇರಿದಂತೆ ಬಿಜೆಪಿ ಕಾರ್ಯಕರ್ತರನ್ನು ಕದ್ರಿ ಸಮೀಪದ ಹಾಲ್ ಒಂದರಲ್ಲಿ ಕೂಡಿ ಹಾಕಿದ್ದರು. ಈ ವಿಚಾರನ್ನು ತಿಳಿದ ಸಂಸದ ನಳಿನ್ ಕುಮಾರ್ ಅವರ ಬಿಡುಗಡೆಗಾಗಿ ನ್ಯಾಯಾಲಯದಿಂದ ಬೇಲ್ ತೆಗೆಸಿಕೊಂಡಿದ್ದರು. ಆ ಬಳಿಕ ಬೇಲ್ ಪತ್ರವನ್ನು ಕದ್ರಿ ಪೋಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮಾರುತಿ ನಾಯಕ್ ಗೆ ತೋರಿಸಿ ಕಾರ್ಯಕರ್ತರನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ಆ ಸಂದರ್ಭದಲ್ಲಿ ಇನ್ಸ್ ಪೆಕ್ಟರ್ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದಾಗ ಸಿಟ್ಟಿಗೆದ್ದ ನಳಿನ್ ಕುಮಾರ್ ಕಟೀಲ್ ಇನ್ಸ್ ಪೆಕ್ಟರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಂಗಳೂರು ಪೋಲೀಸ್ ಕಮಿಷನರ್ ಗೆ ಈ ವಿಚಾರವನ್ನು ತಿಳಿಸಿದ್ದು, ಅವರು ಕಾರ್ಯಕರ್ತರನ್ನು ಬಿಡುಗಡೆಗೊಳಿಸಲು ಸಮ್ಮತಿಸಿದ್ದರೂ, ಇನ್ಸ್ ಪೆಕ್ಟರ್ ಬಿಡುಗಡೆ ಸಾಧ್ಯವಿಲ್ಲ ಎಂದು ವಾದಿಸುತ್ತಿದ್ದ ಸಂದರ್ಭದಲ್ಲಿ ಸಿಟ್ಟಿಗೆದ್ದ ಸಂಸದರು ಪೋಲೀಸ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಳಿನ್ ಕುಮಾರ್ ಜೊತೆ ಸಂಸದೆ ಶೋಭಾ ಕರಂದ್ಲಾಜೆ, ಭಾರತೀ ಶೆಟ್ಟಿ ಸೇರಿದಂತೆ ಹಲವು ಬಿಜೆಪಿ ಮುಖಂಡರೂ ಉಪಸ್ಥಿತರಿದ್ದರು.
You must be logged in to post a comment Login