KARNATAKA
‘ಹಿಂದೂ ವಿರೋಧಿ ರಾಜ್ಯ ಕಾಂಗ್ರೆಸ್ ಸರ್ಕಾರದ್ದು ವಿನಾಶಕಾಲೇ ವಿಪರೀತ ಬುದ್ಧಿ’ : ಶಾಸಕ ವೇದವ್ಯಾಸ್ ಕಾಮತ್ ಆಕ್ರೋಶ
ಮಂಗಳೂರು : ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವುಗೊಳಿಸಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಲ್ಲದೇ ಅಲ್ಲಿನ ಭಕ್ತರ ಮೇಲೆ ಪೊಲೀಸರ ಮೂಲಕ ಲಾಠಿ ಪ್ರಹಾರ ನಡೆಸಿ ಎಂದಿನ ತನ್ನ ಹಿಂದೂ ವಿರೋಧಿ ಧೋರಣೆಯನ್ನು ಮುಂದುವರಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ್ದು ವಿನಾಶಕಾಲೇ ವಿಪರೀತ ಬುದ್ಧಿಯಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಶಾಸಕರು ರಾಮಜನ್ಮಭೂಮಿಯಲ್ಲಿ ಪ್ರಭು ಶ್ರೀ ರಾಮನ ಮಂದಿರ ನಿರ್ಮಾಣ ಸಹಿಸಲಾಗದೆ ಈ ಪರಿ ವಿಘ್ನಸಂತೋಷಿಗಳಂತೆ ವರ್ತಿಸುತ್ತಿರುವುದು ಕಾಂಗ್ರೆಸ್ಸಿನ ಕೀಳು ಮಾನಸಿಕತೆಯ ಪ್ರದರ್ಶನವಾಗಿದೆ. ಭಾರತೀಯತೆ ಮತ್ತು ಹಿಂದೂಗಳ ಅಸ್ಮಿತೆಯ ಮೇಲೆ ಸದಾ ದಾಳಿ ಮಾಡುವ ಜಿಹಾದಿ ಮನಸ್ಥಿತಿಯವರು ಮಾತ್ರ ಔರಂಗಜೇಬ್ ಫ್ಲೆಕ್ಸ್ ಹಾಕಲು ಅವಕಾಶ ಮಾಡಿಕೊಟ್ಟು, ಹನುಮಧ್ವಜವನ್ನು ತೆರವುಗೊಳಿಸಲು ಸಾಧ್ಯ ಎಂದರು.
ರಾಜ್ಯದಲ್ಲಿ ಸದ್ಯ ಹಿಂದೂಗಳ ಪಾಲಿಗೆ ಅಕ್ಷರಶಃ ತುರ್ತು ಪರಿಸ್ಥಿತಿಯ ವಾತಾವರಣ ನಿರ್ಮಾಣವಾಗಿರುವ ಸಂದರ್ಭದಲ್ಲಿ ಹಿಂದೂಗಳಿಗೆ ಧೈರ್ಯ ತುಂಬಲು ಹೋದ ವಿರೋಧಪಕ್ಷದ ನಾಯಕ ಸಹಿತ ಎಲ್ಲರನ್ನೂ ಬಂಧಿಸಿರುವುದು ಕಾಂಗ್ರೆಸ್ಸಿನ ಸರ್ವಾಧಿಕಾರಿ ಧೋರಣೆಯ ಪ್ರತೀಕ. ಮಂಗಳೂರಿನಲ್ಲಿಯೂ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಹಾಕಲಾಗಿದ್ದ ಬ್ಯಾನರ್ ಬಂಟಿಂಗ್ಸ್ ಧ್ವಜಗಳನ್ನು ತೆಗೆಸಲಾಗಿದೆ. ಕೇವಲ ಒಂದು ಸಮುದಾಯದ ಓಲೈಕೆಗಾಗಿ ಬಹುಸಂಖ್ಯಾತ ಹಿಂದೂಗಳ ಭಾವನೆಗಳನ್ನು ಪದೇ ಪದೇ ಕೆಣಕುವುದನ್ನು ಸಹಿಸಲು ಸಾಧ್ಯವೇ ಇಲ್ಲ. ಹಿಂದೂಗಳ ಇಂದಿನ ಆಕ್ರೋಶ ಮುಂದೆ ಜನಾಂದೋಲನವಾಗಿ ಮಾರ್ಪಾಡಾಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಸ್ತಿತ್ವದಲ್ಲಿ ಉಳಿಯುವುದಿಲ್ಲ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.
You must be logged in to post a comment Login