LATEST NEWS
ರಾಜ್ಯ ಕಾಂಗ್ರೇಸ್ ಸರಕಾರಕ್ಕೆ ಪೊಲೀಸರ ಮೇಲೆ ನಿಯಂತ್ರಣ ಇಲ್ಲ – ಶಾಸಕ ವೇದವ್ಯಾಸ್ ಕಾಮತ್

ಮಂಗಳೂರು ಡಿಸೆಂಬರ್ 02: ಕಾಂಗ್ರೆಸ್ ಆಡಳಿತಕ್ಕೇರಿ ವರ್ಷ ತುಂಬುವುದರೊಳಗೆ ರಾಜ್ಯದ ಶಾಂತಿ- ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಚಿಕ್ಕಮಗಳೂರಿನ ವಕೀಲರೊಬ್ಬರು ಹೆಲ್ಮೆಟ್ ಹಾಕಿಲ್ಲವೆಂಬ ಏಕೈಕ ಕಾರಣಕ್ಕೆ ಪೊಲೀಸರು ಅಮಾನುಷವಾಗಿ ಥಳಿಸಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಪೊಲೀಸರ ಮೇಲೆ ನಿಯಂತ್ರಣವಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಶಾಸಕ ವೇದದಾಸ್ ಕಾಮತ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ರಾಜ್ಯದ ವಿವಿಧ ಭಾಗಗಳಲ್ಲಿ ವಕೀಲರಿಂದ ಪ್ರತಿಭಟನೆ ನಡೆಯುತ್ತಿದ್ದು ಅಮಾನವೀಯ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ಈಗಾಗಲೇ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವುದು ಗಮನಾರ್ಹ ಸಂಗತಿ.

ಇಷ್ಟು ದಿನ ಬಡವರು, ರೈತರು, ಬಿಜೆಪಿ ಹಾಗೂ ದೇಶಭಕ್ತ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಪೊಲೀಸರ ಮೂಲಕ ನಡೆಸುತ್ತಿದ್ದ ದೌರ್ಜನ್ಯ ಈಗ ವಕೀಲರ ಮೇಲೂ ಆರಂಭವಾಗಿದೆ. ಕರ್ನಾಟಕ ಪೊಲೀಸ್ ಎಂದರೆ ದೇಶದಾದ್ಯಂತ ಉತ್ತಮ ಹೆಸರು ಗಳಿಸಿರುವ ಇಲಾಖೆ. ಕೆಲವೊಬ್ಬರ ಇಂತಹ ಹದ್ದು ಮೀರಿದ ವರ್ತನೆಯಿಂದಾಗಿ ಇಡೀ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಈ ಕೂಡಲೇ ಪೋಲಿಸರ ಇಂತಹ ಗೂಂಡಾ ವರ್ತನೆಗೆ ಕಡಿವಾಣ ಹಾಕಬೇಕೆಂದು ಶಾಸಕರು ಆಗ್ರಹಿಸಿದರು.