KARNATAKA
ನಿಧಿಗಾಗಿ 25 ಅಡಿ ಆಳದ ಗುಂಡಿ ತೋಡಿದ ಕಿಡಿಗೇಡಿಗಳು: ಗ್ರಾಮಸ್ಥರನ್ನು ಕಂಡು ಪರಾರಿ
ಚಿಕ್ಕಮಗಳೂರು, ಜೂನ್ 23: ಆಲ್ದೂರು ಸಮೀಪದ ಮುಳ್ಳಾರೆಯ ಅರಣ್ಯ ಪ್ರದೇಶದಲ್ಲಿ ನಿಧಿಗಾಗಿ 25 ಅಡಿ ಆಳದ ಗುಂಡಿ ತೋಡಿ ಶೋಧಿಸುತ್ತಿದ್ದ ದುಷ್ಕರ್ಮಿಗಳು, ಗ್ರಾಮಸ್ಥರನ್ನು ಕಂಡು ಪರಾರಿಯಾಗಿದ್ದಾರೆ.
ಗ್ರಾಮದ ಸಮೀದಪ ಅರಣ್ಯದಲ್ಲಿ 15 ಅಡಿ ಅಗಲ ಮತ್ತು 25 ಅಡಿ ಆಳದ ಗುಂಡಿಯನ್ನು ಗುರುವಾರ ರಾತ್ರಿ ತೋಡುತ್ತಿದ್ದರು. ನಿರ್ಜನ ಪ್ರದೇಶದಲ್ಲಿ ಬೆಳಕು ಕಂಡ ಗ್ರಾಮದ ಕೆಲವರು ಸ್ಥಳಕ್ಕೆ ತೆರಳಿದ್ದಾರೆ. ಜನ ಹತ್ತಿರಕ್ಕೆ ಬರುತ್ತಿದ್ದಂತೆ ಎಲ್ಲಾ ವಸ್ತುಗಳನ್ನು ಅಲ್ಲೇ ಬಿಟ್ಟು ಕಿಡಿಗೇಡಿಗಳು ಓಡಿ ಹೋಗಿದ್ದಾರೆ.
ಸ್ಥಳದಲ್ಲಿ ಅರಿಶಿನಿ, ಕುಂಕುಮ, ಕುಂಬಳಕಾಯಿ, ತೆಂಗಿನ ಕಾಯಿ, ಬಲಿ ಕೊಡಲು ತಂದಿದ್ದರು ಎನ್ನಲಾದ ಕೋಳಿ ಸೇರಿ ಎಲ್ಲಾ ವಸ್ತುಗಳನ್ನು ಸ್ಥಳದಲ್ಲೇ ಬಿಟ್ಟು ಹೋಗಿದ್ದಾರೆ. ಉಡುಪಿ ನೋಂದಣಿ ಸಂಖ್ಯೆ ಇರುವ ಎರಡು ಕಾರಿನಲ್ಲಿ ಬಂದಿದ್ದರು ಎಂದು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಲ್ದೂರು ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
You must be logged in to post a comment Login