LATEST NEWS
ಮಂಗಳೂರು ಸ್ಮಾರ್ಟ್ ಸಿಟಿ ಕಾಮಗಾರಿ ಅವ್ಯವಸ್ಥೆ – ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಳ್ಳುತ್ತಿರುವ ಸವಾರರು

ಮಂಗಳೂರು ಜುಲೈ 1: ಮಂಗಳೂರು ಮತ್ತೊಂದು ಬೆಂಗಳೂರು ಆಗುತ್ತಿದ್ದು, ಈಗ ಮಂಗಳೂರಿನಲ್ಲಿ ಎಲ್ಲೆಂದರಲ್ಲಿ ಟ್ರಾಫಿಕ್ ಜಾಮ್ ಸರ್ವೆ ಸಾಮಾನ್ಯವಾಗಿದ್ದು, ಒಂದೇ ಸಲ ಎಲ್ಲಾ ಕಾಮಗಾರಿ ಮುಗಿಸಬೇಕೆಂಬ ಹಠಕ್ಕೆ ಬಿದ್ದ ಜಿಲ್ಲಾಡಳಿತ ನಗರದ ಪ್ರಮುಖ ರಸ್ತೆಗಳನ್ನು ಅಗೆದು ಹಾಕಿ ಕಾಮಗಾರಿ ಆರಂಭಿಸಿದೆ.
ಕೊರೊನಾ ಲಾಕ್ ಡೌನ್ ಪೂರ್ವದಲ್ಲಿ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಕೈಗೆತ್ತಿಕೊಂಡ ಪಾಲಿಕೆ, ಬಹುತೇಕ ಎಲ್ಲಾ ರಸ್ತೆಗಳನ್ನು ಅಗೆದು ಹಾಕಿ ಕಾಮಗಾರಿ ಪ್ರಾರಂಭಿಸಿತ್ತು, ಆದರೆ ಲಾಕ್ ಡೌನ್ ಜಾರಿ ಆದ ನಂತರ ಕಾರ್ಮಿಕರ ಅಲಭ್ಯತೆ ಸ್ಮಾರ್ಟ ಸಿಟಿಯ ಎಲ್ಲಾ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುವಂತೆ ಮಾಡಿತು.

ಆದರೆ, ಲಾಕ್ಡೌನ್ ಸಡಿಲಿಕೆ ಬಳಿಕ ಸಂಪೂರ್ಣ ಟ್ರಾಫಿಕ್ ಸಮಸ್ಯೆ ಸುಳಿಯಲ್ಲಿ ಸಿಲುಕಿಕೊಂಡಿದೆ. ಇದಕ್ಕೆ ಕಾರಣ ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿ. ಸದ್ಯ ನಗರದ ಲೈಟ್ ಹೌಸ್ ಹಿಲ್ ರೋಡ್, ಬೆಸೆಂಟ್ ರಸ್ತೆ, ಬಂಟ್ಸ್ ಹಾಸ್ಟೆಕ್ ರಸ್ತೆ, ಡೊಂಗರಕೇರಿ ರಸ್ತೆಯ ಕಾಮಗಾರಿ ಪ್ರಗತಿಯಲ್ಲಿದೆ. ಇವು ಮಂಗಳೂರು ನಗರವನ್ನು ಸಂಪರ್ಕಿಸುವ ರಸ್ತೆಗಳು. ಇವುಗಳ ಮೂಲಕ ನಾಳೆ ಬಸ್ ಓಡಾಟ ನಡೆಸಬೇಕು. ಈಗಾಗಲೇ ನಗರಕ್ಕೆ ದ್ವಿಚಕ್ರ ವಾಹನ ಹಾಗೂ ಕಾರುಗಳು ಓಡಾಟ ನಡೆಸುತ್ತಿರುವುದರಿಂದ ಆಗಾಗ ನಗರದ ಹಲವು ಕಡೆಗಳಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ.
ಲಾಕ್ಡೌನ್ ತೆರವಾದಾಗಿನಿಂದ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ನಾಳೆಯಿಂದ ಬಸ್ ಸಂಚಾರ ಪ್ರಾರಂಭವಾಗುವುದರಿಂದ ಜನರ ಓಡಾಟ ಹೆಚ್ಚಾಗಲಿದೆ. ಹೆಚ್ಚಿನ ಕಡೆಗಳಲ್ಲಿ ಒನ್ ವೇ ಸಂಚಾರ ನಡೆಯುತ್ತಿರುವುದರಿಂದ ಟ್ರಾಫಿಕ್ ಜಾಂ ಜೊತೆಗೆ ಅಪಘಾತಗಳು ನಡೆಯುತ್ತಿವೆ.
ನಾಳೆ ಟ್ರಾಫಿಕ್ ಜಾಂ ಬಗ್ಗೆ ಪೊಲೀಸರಿಗೆ ಅರಿವು ಇದೆ. ಈ ಹಿನ್ನೆಲೆಯಲ್ಲಿ ಕೆಲವು ಕಡೆಗಳಲ್ಲಿ ಪೊಲೀಸರೇ ಖುದ್ದು ರಸ್ತೆ ತೆರವುಗೊಳಿಸಿದ್ದಾರೆ. ನಾಳೆ ನಗರದ ವಿವಿಧ ಭಾಗಗಳಲ್ಲಿ ಉಂಟಾಗುವ ಟ್ರಾಫಿಕ್ ಜಾಂನಿಂದ ಇಡೀ ಮಂಗಳೂರು ನಗರ ಸ್ಧಬ್ದವಾಗಲಿದೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಿದ್ದು, ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ವ್ಯಾಪಾರ ಚಟುವಟಿಕೆಗಳಿಗೆ ಅನುಮತಿ ಇರುವುದರಿಂದ ಈ ಸಂದರ್ಭದಲ್ಲಿ ಕೆಲಸ ಮುಗಿಸಲು ಒಮ್ಮೆಲೆ ಜನರು ನಗರಕ್ಕೆ ಬರುತ್ತಿರುವುದು ಟ್ರಾಫಿಕ್ ಸಮಸ್ಯೆ ಮತ್ತಷ್ಟು ಹೆಚ್ಚಿಸಿದೆ. ಇಂದಿನಿಂದ ಖಾಸಗಿ ಬಸ್ ಸಂಚಾರ ಆರಂಭವಾಗಲಿದ್ದು, ಸಂಚಾರ ವ್ಯವಸ್ಥೆ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ.