LATEST NEWS
ತನ್ನ ಅಂಗಡಿಗೆ ತಾನೇ ಬೆಂಕಿ ಹಚ್ಚಿದ ಅಂಗಡಿ ಮಾಲಕ – ಪುತ್ತೂರಿನಲ್ಲೊಂದು ವಿಲಕ್ಷಣ ಘಟನೆ
ಪುತ್ತೂರು ಸೆಪ್ಟೆಂಬರ್ 7: ವ್ಯಾಪಾರ ಮಾಡುತ್ತಿದ್ದ ಅಂಗಡಿಗೆ ಅದರ ಮಾಲಕನೇ ಬೆಂಕಿ ಹಚ್ಚಿ ಅಂಗಡಿಯೊಳಗಿನ ಸಾಮಾಗ್ರಿಗಳನ್ನು ಸುಟ್ಟು ಭಸ್ಮ ಮಾಡಿದ ವಿಚಿತ್ರ ಘಟನೆ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಸಮೀಪದ ಪಂಚೋಡಿ ಮಾವಿನಕಟ್ಟೆ ಎಂಬಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಪುತ್ತೂರು ತಾಲೂಕಿನ ಈಶ್ವರಮಂಗಲದ ಮಾವಿನಕಟ್ಟೆ ನಿವಾಸಿ ಮಹಮ್ಮದ್ ತನ್ನ ಅಂಗಡಿಗೆ ಬೆಂಕಿ ಹಚ್ಚಿದ ವಿಚಿತ್ರ ವ್ಯಕ್ತಿಯಾಗಿದ್ದಾರೆ. ಹಾಡುಹಗಲೇ ಅಂಗಡಿ ಮಾಲಕ ಈ ಕೃತ್ಯವನ್ನು ನಡೆಸಿದ್ದು, ಸ್ಥಳಿಯರ ಈ ಘಟನೆಯನ್ನು ಗಮನಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಇದೇ ಗೂಡಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಇವರು ಲಾಕ್ಡೌನ್ ಬಳಿಕ ಕಳೆದ ಎರಡು ತಿಂಗಳಿನಿಂದ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದರು. ಅಂಗಡಿಯಲ್ಲಿ ಸ್ಟೇಶನರಿ ಸಾಮಾಗ್ರಿ ಮತ್ತು ಚಹಾ ಹೊಂದಿರುವ ಸಣ್ಣ ಕ್ಯಾಂಟೀನ್ ಕೂಡಾ ಅದರೊಳಗಿತ್ತು.
ಇಂದು ಬೆಳಿಗ್ಗೆ ಎಂದಿನಂತೆ ಮಹಮ್ಮದ್ರವರು ಅಂಗಡಿ ಬಾಗಿಲು ತೆರೆದಿದ್ದರು. ಮಧ್ಯಾಹ್ನ ಆಗುತ್ತಲೇ ಅಂಗಡಿಯೊಳಗಿನಿಂದ ಹೊರಗೆ ಬಂದು ತನ್ನ ಅಂಗಡಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ತಕ್ಷಣವೇ ಸ್ಥಳೀಯರು ಬೆಂಕಿ ನಂದಿಸಲು ಅಂಗಡಿಯತ್ತ ಧಾವಿಸಿದ್ದು ಆ ವೇಳೆ ಬೆಂಕಿ ನಂದಿಸದಂತೆ ಮಾಲಕ ಮಹಮ್ಮದ್ರವರು ತಡೆದಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ಸ್ಥಳೀಯರು ಮಹಮ್ಮದ್ ಅಲ್ಲಿಂದ ತೆರಳಿದ ಬಳಿಕ ಅಂಗಡಿಯೊಳಗಿನ ಬೆಂಕಿಯನ್ನು ನಂದಿಸಿದ್ದಾರೆ. ಈ ವೇಳೆಗೆ ಸ್ಥಳೀಯರು ಪೊಲೀಸರಿಗೂ ಮಾಹಿತಿ ನೀಡಿದ್ದು,ಸ್ಥಳಕ್ಕೆ ಸಂಪ್ಯ ಪೋಲೀಸರೂ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಅವಘಡದಿಂದ ಅಂಗಡಿಯೊಳಗಿದ್ದ ಸುಮಾರು ರೂ. ೧೫ ಸಾವಿರಕ್ಕೂ ಮಿಕ್ಕಿ ಸ್ಟೇಶನರಿ ಸಾಮಾಗ್ರಿಗಳು ಸುಟ್ಟು ಭಸ್ಮವಾಗಿದೆ. ಅಂಗಡಿಯೊಳಗೆ ಚಹಾ ಮಾಡಲು ಇಟ್ಟಿದ್ದ ಸ್ಟೌವ್ನ ಸಣ್ಣ ಗಾತ್ರದ ಸಿಲಿಂಡರ್ ಬೆಂಕಿಗೆ ಆಹುತಿಯಾಗಿ ಸ್ಪೋಟಗೊಂಡಿದ್ದರೂ ಯಾವುದೇ ಹೆಚ್ಚಿನ ಅನಾಹುತ ಉಂಟಾಗಿಲ್ಲ. ಅಂಗಡಿಯ ಮಾಡು ಹೊರತುಪಡಿಸಿ ಉಳಿದೆಲ್ಲವೂ ಬೆಂಕಿಗೆ ಆಹುತಿಯಾಗಿದೆ. ಮಹಮ್ಮದ್ರವರು ಏಕಾಏಕಿ ತನ್ನ ಅಂಗಡಿಗೆ ಬೆಂಕಿ ಹಚ್ಚಿದ್ದು ಸ್ಥಳಿಯರಲ್ಲಿ ಅಚ್ಚರಿಯನ್ನು ಹುಟ್ಟಿಸಿದೆ. ಘಟನೆಗೆ ಕಾರಣ ಏನೆಂದು ತಿಳಿಯಲು ಪೊಲೀಸರು ಮಹಮ್ಮದ್ರನ್ನು ವಿಚಾರಣೆ ನಡೆಸುತ್ತಿದ್ದಾರೆ
Video:
You must be logged in to post a comment Login