LATEST NEWS
ಮಲ್ಪೆ ಹಲ್ಲೆ ಪ್ರಕರಣ – ಮುಖ್ಯಮಂತ್ರಿ ಸಿದ್ದರಾಮಯ್ಯ ಗೆ ಕೋಟ ಮನವಿ

ಉಡುಪಿ ಮಾರ್ಚ್ 24: ಮಲ್ಪೆಯ ಮೀನುಗಾರರ ಸಮಸ್ಯೆಯನ್ನು ಸಾಮರಸ್ಯದಿಂದ ಬಗೆಹರಿಸಿ ಎಲ್ಲಾ ಸಮುದಾಯದವರೂ ನೆಮ್ಮದಿಯ ಬದುಕು ರೂಪಿಸಿಕೊಳ್ಳಲು ಅವಕಾಶ ಮಾಡಿಕೊಡಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಹಲವಾರು ವರ್ಷಗಳಿಂದ ಒಟ್ಟಾಗಿ ಬದುಕುತ್ತಿದ್ದ ಮಲ್ಪೆಯ ಮೀನುಗಾರರು ಮತ್ತು ರಾಜ್ಯದ ಇತರ ಭಾಗದ ಕೆಲಸಗಾರರ ಮಧ್ಯೆ ನೋವಿನ ಘಟನೆಯೊಂದು ನಡೆದು ಹೋಗಿದೆ. ಪ್ರಕರಣದ ಬಗ್ಗೆ ನೋವು ವ್ಯಕ್ತಪಡಿಸಿ, ಘಟನೆಯನ್ನು ಒಟ್ಟಾಗಿ ಚರ್ಚಿಸಿ ಪರಿಹಾರ ಮಾಡಿಕೊಂಡಿದ್ದಾರೆ. ಮತ್ತು ಮುಂದೆಂದೂ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸುವ ಭಾವನೆ ವ್ಯಕ್ತಪಡಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಸಂತ್ರಸ್ತ ಮಹಿಳೆ ಮಾಧ್ಯಮದ ಎದುರು ಹಾಗೂ ಪೊಲೀಸ್ ಠಾಣೆಯಲ್ಲಿ ತನ್ನ ಮೇಲೆ ಹಲ್ಲೆ ನಡೆದದ್ದು ಹೌದಾದರೂ ಜಾತಿನಿಂದನೆ ಮಾಡಿಲ್ಲ. ನಡೆಯದ ಪ್ರಕರಣವನ್ನು ದಾಖಲಿಸಬಾರದೆಂದು ವಿನಂತಿಸಿ ಹೇಳಿಕೆ ಕೊಟ್ಟಿದ್ದಾರೆ ಎಂದೂ ತಿಳಿಸಿದ್ದಾರೆ.

ಈಗಾಗಲೇ ಬಂಧಿತ ಮಹಿಳೆಯರ ಮೇಲಿರುವ ಪ್ರಕರಣ ಹಿಂಪಡೆದು, ಮಲ್ಪೆಯಲ್ಲಿ ಶಾಂತಿ ನೆಲೆಸುವಂತಾಗಲು ಉಡುಪಿ ಜಿಲ್ಲಾಧಿಕಾರಿ ಮತ್ತು ಎಸ್ಪಿಗೆ ಆದೇಶಿಸಬೇಕು ಎಂದು ಆಗ್ರಹಿಸಿದ್ದಾರೆ.