ಕೇರಳ ಅಗಸ್ಟ್ 09: ಹೃದಯಾಘಾತದಿಂದಾಗಿ ಮಲಯಾಳಂನ ಖ್ಯಾತ ಸಿನೆಮಾ ನಿರ್ದೇಶಕ ಸಿದ್ಧಿಕಿ ಮೃತಪಟ್ಟಿದ್ದಾರೆ. ಆರೋಗ್ಯ ಸಮಸ್ಯೆಯ ಕಾರಣದಿಂದಾಗಿ ಅವರು ಸುಮಾರು ಒಂದು ತಿಂಗಳಿನಿಂದ ಅಮೃತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಹೃದಯಾಘಾತವಾಗಿತ್ತು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

1986ರಲ್ಲಿ ತೆರೆಕಂಡ ‘ಪಪ್ಪನ್ ಪ್ರಿಯಪ್ಪೆತ್ತ ಪಪ್ಪನ್’ ಸಿನಿಮಾಗೆ ಚಿತ್ರಕತೆ ಬರೆಯುವುದರೊಂದಿಗೆ ಸಿನಿ ಪಯಣ ಆರಂಭಿಸಿದ ಸಿದ್ಧಿಕಿ, 1989ರಲ್ಲಿ ಬಿಡುಗಡೆಯಾದ ‘ರಾಮ್ಜಿ ರಾವ್ ಸ್ಪೀಕಿಂಗ್’ ಸಿನಿಮಾ ಮೂಲಕ ನಿರ್ದೇಶಕರಾದರು. ಅವರು ನಿರ್ದೇಶನ ಮಾಡಿರುವ ಕೊನೇ ಸಿನಿಮಾ ‘ಬಿಗ್ ಬ್ರದರ್’ 2020ರಲ್ಲಿ ಬಿಡುಗಡೆಯಾಗಿದೆ. ಮಲಯಾಳಂ ಮಾತ್ರವಲ್ಲದೆ ತಮಿಳು, ಹಿಂದಿಯಲ್ಲೂ ಸಿನಿಮಾ ನಿರ್ದೇಶಿಸಿದ ಖ್ಯಾತಿ ಅವರದ್ದು.
ಸಿದ್ಧಿಕಿ ನಿರ್ದೇಶನದ ‘ಬಾಡಿಗಾರ್ಡ್’ ಸಿನಿಮಾ ಭಾರಿ ಯಶಸ್ಸು ಕಂಡಿತ್ತು. ಈ ಚಿತ್ರವನ್ನು ಅವರು ತಮಿಳಿನಲ್ಲಿ ವಿಜಯ್ ಜೊತೆಗೂಡಿ ‘ಕಾವಲನ್’ ಮತ್ತು ಹಿಂದಿಯಲ್ಲಿ ನಟ ಸಲ್ಮಾನ್ ಖಾನ್ ಅದೇ (ಬಾಡಿಗಾರ್ಡ್) ಹೆಸರಿನಲ್ಲಿ ನಿರ್ದೇಶನ ಮಾಡಿದ್ದರು. ಬಳಿಕ ಈ ಚಿತ್ರ ಕನ್ನಡದಲ್ಲೂ ತಯಾರಾಯಿತು. ನಟ ಜಗ್ಗೇಶ್ ನಾಯಕನಾಗಿ ಕಾಣಿಸಿಕೊಂಡಿದ್ದರು.



