KARNATAKA
ಕೆಎಸ್ಆರ್ ಟಿಸಿ ಬಸ್ ನೌಕರರ ಮುಷ್ಕರ ಅಂತ್ಯ.. ರಾತ್ರಿಯಿಂದಲೇ ಬಸ್ ಸಂಚಾರ ಆರಂಭ
ಬೆಂಗಳೂರು ಡಿಸೆಂಬರ್ 13: ಕಳೆದ ಮೂರು ದಿನಗಳಿಂದ ಮುಷ್ಕರದಲ್ಲಿದ್ದ ಕೆಎಸ್ ಆರ್ ಟಿಸಿ ನೌಕರರ ಹಾಗೂ ರಾಜ್ಯ ಸರಕಾರದ ನಡುವೆ ಇಂದು ನಡೆದಿದ್ದ ಸಭೆ ಫಲಪ್ರದವಾಗಿದ್ದು, ಇಂದು ರಾತ್ರಿಯಿಂದಲೇ ರಾಜ್ಯ ಸಾರಿಗೆ ಸಂಸ್ಥೆ ಬಸ್ ಸಂಚಾರ ಆರಂಭಿಸಲಿದೆ.
ಮೂರು ದಿನಗಳಿಂದ ಸಾರಿಗೆ ಸಿಬ್ಬಂದಿ ಮುಷ್ಕರ ನಡೆಸುತ್ತಿದ್ದ ಪರಿಣಾಮ ಸರ್ಕಾರಿ ಬಸ್ಗಳ ಸಂಚಾರವಿಲ್ಲದೆ ಸಂಕಷ್ಟಕ್ಕೆ ಸಿಲುತ್ತಿದ್ದ ಪ್ರಯಾಣಿಕರೀಗ ನಿಟ್ಟುಸಿರು ಬಿಡುವಂತಾಗಿದೆ. ರಾಜ್ಯಸರಕಾರ ಹಾಗೂ ಪ್ರತಿಭಟನೆ ನಡೆಸುತ್ತಿದ್ದ ಸಾರಿಗೆ ಸಿಬ್ಬಂದಿ ಜತೆಗಿನ ಮಾತುಕತೆ ಯಶಸ್ವಿಯಾಗಿದ್ದು, ಇಂದು ರಾತ್ರಿಯಿಂದಲೇ ಬಸ್ ಸಂಚಾರ ಪುನರಾರಂಭ ಆಗಲಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಘೋಷಿಸಿದ್ದಾರೆ.
ಕೆಎಸ್ ಆರ್ ಟಿಸಿ ನೌಕರರನ್ನು ಸರ್ಕಾರಿ ಸಿಬ್ಬಂದಿಯನ್ನಾಗಿ ಪರಿಗಣಿಸಬೇಕು ಎಂಬುದರ ಜತೆಗೆ ಹಲವು ಬೇಡಿಕೆ ಈಡೇರಿಸುವಂತೆ ಸಾರಿಗೆ ನೌಕರರು ಪಟ್ಟುಹಿಡಿದು ಮುಷ್ಕರ ನಡೆಸುತ್ತಿದ್ದರು. ಭಾನುವಾರ ಸಂಜೆ ನಡೆದ ಸಂಧಾನ ಸಭೆ ಸಫಲವಾಗಿದ್ದು, ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಲ್ಲ ಎಂದ ಸರ್ಕಾರ, 6ನೇ ವೇತನ ಆಯೋಗ ಜಾರಿ ಸೇರಿದಂತೆ, ಉಳಿದ ಬೇಡಿಕೆ ಈಡೇರಿಸಲು ಒಪ್ಪುವ ಮೂಲಕ ಮುಷ್ಕರಕ್ಕೆ ಇತಿಶ್ರೀ ಹಾಡಿಸಿದೆ.
You must be logged in to post a comment Login